ವಿಜಯಪುರ: ‘ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ.ಪಾಟೀಲ, ‘ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್’ ಎಂದು ತಿರುಗೇಟು ನೀಡಿದರು.
ಇಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ ಅವರನ್ನು ಸನ್ಮಾನಿಸಿದ ಚಿತ್ರಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್’ ಎಂದರು.
‘ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಸತ್ಯ. ಆ ಇತಿಹಾಸವನ್ನು ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್ಎಸ್ಎಸ್ ಸಂಘಟನೆಯವರ ಪಾತ್ರವಿಲ್ಲ. ಅವರೆಲ್ಲರೂ ಬ್ರಿಟಿಷರ ಪರ ಇದ್ದರು’ ಎಂದರು.
‘ಶಾಲೆ- ಕಾಲೇಜುಗಳಲ್ಲಿ ಜಾತಿ, ಧರ್ಮದ ವಿಷಯ ಬರಬಾರದು. ಹಿಜಾಬ್ ಗದ್ದಲ ಬರುವ ಮುಂಚೆ ಶಾಲೆ-ಕಾಲೇಜು ಹೇಗಿದ್ದವೋ ಹಾಗೆಯೇ ಇರಲಿ’ ಎಂದರು.