ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ತಾಲ್ಲೂಕಿನ ಘಾಳಪೂಜಿ ಮೊರಾರ್ಜಿ ದೇಸಾಯಿ ವಸತಿ (ಪ.ಜಾ)ಶಾಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವಿಶ್ರಾಂತಿ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿಣದ ಬೆಡ್ ಮೇಲೆ ಮಲಗಿದ್ದ ವಿದ್ಯಾರ್ಥಿಗಳಿಗೂ ಶಾಕ್ ಹೊಡೆದಿದೆ. ಬಳಿಕ ಬೆಂಕಿಹೊತ್ತಿಕೊಂಡಿದೆ. ವಿದ್ಯಾರ್ಥಿಗಳಾದ ಮಲ್ಲು ಭಜಂತ್ರಿ, ಸಮರ್ಥ ಭಜಂತ್ರಿ ಹಾಗೂ ಸಾಗರ ಮಾದರ ಗಾಯಗೊಂಡಿದ್ದಾರೆ. ಸಮರ್ಥ ಭಜಂತ್ರಿಯನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.
16 ವಿದ್ಯಾರ್ಥಿಗಳು ಕೊಠಡಿಯಲ್ಲಿ ಮಲಗಿದ್ದರು ಎನ್ನಲಾಗಿದೆ. ಬೆಂಕಿ ಹಾಸಿಗೆಗೆ ಹೊತ್ತಿಕೊಂಡಿದ್ದರಿಂದ ಜೀವ ಭಯದಿಂದ ವಿದ್ಯಾರ್ಥಿಗಳು ಹೊರಕ್ಕೆ ಓಡಿ ಬಂದಿದ್ದಾರೆ.
ವಸತಿ ಶಾಲೆಯಲ್ಲಿ ಭಾನುವಾರ ಘಟನೆ ನಡೆದಿದ್ದರೂ ಮಂಗಳವಾರ ಈ ಪ್ರಕರಣ ಪಾಲಕರ ಗಮನಕ್ಕೆ ಬಂದಿದೆ. ಈ ನಿರ್ಲಕ್ಷ್ಯಕ್ಕೆ ಪ್ರಾಚಾರ್ಯ, ವಾರ್ಡನ್ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ತಿಳಿದು ತಹಶೀಲ್ದಾರ್ ಬಸವರಾಜ ನಾಗರಾಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಬಿಇಒ ಬಿ.ಎಸ್.ಸಾವಳಗಿ ವಸತಿ ನಿಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.