ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಮರ್ಯಾದೆಗೇಡು ಹತ್ಯೆ: ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಯುವಕ

Last Updated 23 ಅಕ್ಟೋಬರ್ 2021, 13:17 IST
ಅಕ್ಷರ ಗಾತ್ರ

ಆಲಮೇಲ(ವಿಜಯಪುರ): ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಲಿಂಗಾಯತ ಯುವಕನನ್ನು ಮರ್ಯಾದೆಗೇಡು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರವಿ ನಿಂಬರಗಿ (34) ಮರ್ಯಾದೆಗೇಡು ಹತ್ಯೆಯಾದ ಯುವಕ. ಗ್ರಾಮದ ಹೊಲವೊಂದರ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಈ ಕುರಿತು ’ಪ್ರಜಾವಾಣಿ‘ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ರವಿ ನಿಂಬರಗಿ ಅದೇ ಗ್ರಾಮದ ಮುಸ್ಲಿಂ ಯುವತಿ ಅಮ್ರಿನ್‌(24) ನಾಲ್ಕು ವರ್ಷದಿಂದ ಪ‍ರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ತಂದೆ, ತಾಯಿಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಪ್ರೇಮಿಗಳಿಗೆ ಈ ಸಂಬಂಧ ಎಚ್ಚರಿಕೆಯನ್ನೂ ನೀಡಿದ್ದರು ಎಂದು ಹೇಳಿದರು.

ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಜೋಡಿಯನ್ನು ಬೇರೆ ಮಾಡುವ ಸಂಬಂಧ ಯುವತಿ ಕಡೆಯವರು ಅ.21ರಂದು ರವಿ ನಿಂಬರಗಿಯನ್ನು ಹೊತ್ತುಕೊಂಡು ಹೋಗಿ ಹೊಡೆಯುತ್ತಿರುವುದಾಗಿ ಮತ್ತು ಅವನ ಜೀವಕ್ಕೆ ಅಪಾಯ ಇದೆ ಎಂದು ಸ್ವತಃ ಯುವತಿಯೇ ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಯುವತಿ ನೀಡಿದ ಮಾಹಿತಿ ಆಧರಿಸಿ ದೂರು ದಾಖಲಿಸಿಕೊಳ್ಳಲಾಯಿತು ಎಂದರು.

ಪ್ರಕರಣದ ಹಿನ್ನೆಲೆಯಲ್ಲಿ ಯುವತಿಯ ಮನೆಯವರೆಲ್ಲರೂ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿಮೂರು ತನಿಖಾ ತಂಡ ನೇಮಕ ಮಾಡಲಾಗಿತ್ತು. ತಂಡವು ಯುವತಿಯ ಮಾವ ಮತ್ತು ಸಹೋದರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆರೋಪಿಗಳು ಯುವಕನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಯುವತಿಯ ಜೀವಕ್ಕೂ ಅಪಾಯ ಇದೆ ಎಂಬ ಕಾರಣಕ್ಕೆ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ ಎಂದು ಹೇಳಿದರು.

ಬಜರಂಗದಳ ಖಂಡನೆ

ಬಳಗಾನೂರ ಗ್ರಾಮದ ಹಿಂದೂ ಯುವಕ ರವಿ ನಿಂಬರಗಿ ಹತ್ಯೆ ಮಾಡಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಬಜರಂಗದಳ ಹಾಗೂ ವಿಶ್ವ ಹಿಂದೂಪರಿಷತ್ ಜಿಲ್ಲಾ ಮುಖಂಡ ಶ್ರೀಮಂತ ದುದ್ದಗಿ ಆಗ್ರಹಿಸಿದ್ದಾರೆ.ಆರೋಪಿಗಳ ಬಂಧಿಸುವಲ್ಲಿ ವಿಳಂಬ ಮಾಡಿದರೆ ವಿಶ್ವಹಿಂದೂ ಪರಿಷತ್ ಬಳಗಾನೂರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT