ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ‘ಮುನ್ನುಡಿ’

Published 18 ಡಿಸೆಂಬರ್ 2023, 7:44 IST
Last Updated 18 ಡಿಸೆಂಬರ್ 2023, 7:44 IST
ಅಕ್ಷರ ಗಾತ್ರ

ವಿಜಯಪುರ: ಇಂಡಿ ಪ್ರತ್ಯೇಕ ಜಿಲ್ಲೆ ಬೇಡಿಕೆ ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿದೆ. ಇಂಡಿ ಶಾಸಕ ಯಶವಂತರಾಯಗೌಡ ಅವರ ಕನಸಿನ ಜಿಲ್ಲೆ ರಚನೆಗೆ ರಕ್ಕೆಪುಕ್ಕ ಮೂಡತೊಡಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಜಿಲ್ಲೆ ರಚನೆ ಕುರಿತು ಪ್ರಾಥಮಿಕ ಹಂತವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ವಿಜಯಪುರ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ‘ಪ್ರಜಾವಾಣಿ‘ಗೆ ಖಚಿತ ಪಡಿಸಿದ್ದಾರೆ.

ಶೀಘ್ರದಲ್ಲೇ ಜನಾಭಿಪ್ರಾಯ ಸಂಗ್ರಹ ಆರಂಭವಾಗಲಿದ್ದು, ಬಳಿಕ ನೂತನ ಜಿಲ್ಲೆ ರಚನೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. 

‘ಇಂಡಿ ಪ್ರತ್ಯೇಕ ಜಿಲ್ಲೆ ಮಾಡಿ, ಇಲ್ಲವೇ, 371 ಜೆ ಗೆ ಸೇರ್ಪಡೆ ಮಾಡಿ’ ಎಂಬುದು ಶಾಸಕ ಯಶವಂತರಾಯಗೌಡ ಪಾಟೀಲರ ಮುಖ್ಯ ಬೇಡಿಕೆಯಾಗಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು  ಭೇಟಿಯಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ.

ಇಂಡಿ ವ್ಯಾಪ್ತಿಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ಹೋರಾಟಗಾರರು ಪ್ರತ್ಯೇಕ ಜಿಲ್ಲೆ ರಚನೆ ಹೋರಾಟ ಕೈಗೆತ್ತಿಕೊಂಡಿದ್ದಾರೆ. 

‘ಪ್ರತ್ಯೇಕ ಜಿಲ್ಲೆ ಬೇಡಿಕೆ ತಪ್ಪಲ್ಲ. ಆದರೆ, ಆಡಳಿತಾತ್ಮಕ ಹಾಗೂ ಭೌಗೋಳಿಕ ದೃಷ್ಟಿಯಿಂದ ಕಾರ್ಯಸಾದುವೇ ಎಂಬುದನ್ನು ಪರಿಶೀಲಿಸಿದ ಬಳಿಕ ಸರ್ಕಾರ ಮುಂದಿನ ತೀರ್ಮಾನಕೈಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಈಗಾಗಲೇ ತಮ್ಮ ಅಭಿಪ್ರಾಯ ನೀಡಿದ್ದಾರೆ.

ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಲಮೇಲ, ಸಿಂದಗಿ, ದೇವರಹಿಪ್ಪರಗಿ, ಚಡಚಣ (ನಾಗಠಾಣ ಕ್ಷೇತ್ರ) ತಾಲ್ಲೂಕುಗಳ ಶಾಸಕರು, ಮಾಜಿ ಶಾಸಕರು, ರಾಜಕೀಯ ಮುಖಂಡರು, ಸಾಹಿತಿಗಳು, ವಿವಿಧ ಸಂಘಟನೆಗಳ ಪ್ರಮುಖರ ಅಭಿಪ್ರಾಯ ಏನು ಎಂಬುದನ್ನು ತಿಳಿಯುವ ಪ್ರಯತ್ನವನ್ನು  ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಪ್ರಜಾವಾಣಿ’  ಬೆಳಕು ಚೆಲ್ಲಿದೆ.

ಪರ, ವಿರೋಧ ಅಭಿಪ್ರಾಯ:

ಈಗಿರುವ ವಿಜಯಪುರ ಜಿಲ್ಲೆಯನ್ನು ಪ್ರತ್ಯೇಕಿಸಿ ಇಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಇಂಡಿ, ಚಡಚಣ, ದೇವರಹಿಪ್ಪರಗಿ, ಸಿಂದಗಿ, ಆಲಮೇಲ ತಾಲ್ಲೂಕು ಒಳಗೊಂಡು ನೂತನ ಜಿಲ್ಲೆ ರಚನೆ ಮಾಡಬೇಕು ಎಂಬ ಬೇಡಿಕೆಗೆ ಇಂಡಿ, ಚಡಚಣ, ಆಲಮೇಲ ತಾಲ್ಲೂಕು ವ್ಯಾಪ್ತಿಯಲ್ಲಿ ಸಹಮತ ವ್ಯಕ್ತವಾಗಿದೆ. ಇನ್ನುಳಿದಂತೆ ಸಿಂದಗಿ ಮತ್ತು ದೇವರಹಿಪ್ಪರಗಿ ತಾಲ್ಲೂಕುಗಳಲ್ಲಿ ಭಿನ್ನಮತ ವ್ಯಕ್ತವಾಗಿದೆ.

ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಸಹಮತ ವ್ಯಕ್ತವಾಗಿದೆ. ಇಂಡಿ ಪ್ರತ್ಯೇಕ ಜಿಲ್ಲೆಯಾದರೆ ಗಡಿಭಾಗದ ನಮ್ಮ ತಾಲ್ಲೂಕು ಅಭಿವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಲಮೇಲ ತಾಲ್ಲೂಕು ವ್ಯಾಪ್ತಿಯಲ್ಲಿ ಸಹಮತ ವ್ಯಕ್ತವಾಗಿದೆ. ಈ ಮೊದಲಿನಿಂದಲೂ ಇಂಡಿ ಜೊತೆಗೆ ಆಲಮೇಲಕ್ಕೆ ಹಲವು ಬಗೆಯ ನಂಟಿದೆ. ಈ ಕಾರಣಕ್ಕೆ ಹೊಸ ಜಿಲ್ಲೆ ರಚನೆಗೆ ಬೆಂಬಲ ಇದೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಮಾಡುವುದಿದ್ದರೇ ಸಿಂದಗಿ ತಾಲ್ಲೂಕು ಸೇರ್ಪಡೆ ಮಾಡುವುದು ಬೇಡ. ಸಾಧ್ಯವಾದರೆ ಈಗಿರುವ ವಿಜಯಪುರ ಜಿಲ್ಲೆಯಲ್ಲೇ ಉಳಿಸಿ, ಇಲ್ಲವೇ ಸಿಂದಗಿಯನ್ನೇ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಎಂಬ ಅಭಿಪ್ರಾಯ ಕೇಳಿಬಂದಿದೆ. 

ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗಿಂತ ಈಗಿರುವ ವಿಜಯಪುರ ಜಿಲ್ಲೆ ಯಥಾಸ್ಥಿತಿ ಉಳಿಯಲಿ, ಪ್ರತ್ಯೇಕ ಜಿಲ್ಲೆ ರಚನೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಂಡಿ ಹೊಸ ಜಿಲ್ಲೆ ರಚನೆ ಪ್ರಕ್ರಿಯೆಗೆ ಶೀಘ್ರದಲ್ಲೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಚಾಲನೆ ನೀಡಲಿದ್ದು, ಯಾವ ತಾಲ್ಲೂಕುಗಳು ಹಾಲಿ ವಿಜಯಪುರ ಜಿಲ್ಲೆಯಲ್ಲಿ ಉಳಿಯಲಿವೆ, ಯಾವೆಲ್ಲ ತಾಲ್ಲೂಕುಗಳು ನೂತನ ಇಂಡಿಗೆ ಸೇರ್ಪಡೆಯಾಗಲಿವೆ ಎಂಬ ಕುರಿತು ಜನಾಭಿಪ್ರಾಯ ಸಂಗ್ರಹ ಬಳಿಕ ಖಚಿತವಾಗಲಿದೆ.

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಅಮರನಾಥ ಹಿರೇಮಠ, ರಮೇಶ ಕತ್ತಿ, ಅಲ್ಲಮಪ್ರಭು ಕರ್ಜಗಿ, ಶಂಕರ ಹೆಬ್ಬಾಳ

ಸಿಂದಗಿಗೆ ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ. ದೇವಹಿಪ್ಪರಗಿ ಆಲಮೇಲ ಇಂಡಿ ಚಡಚಣ ತಾಲ್ಲೂಕುಗಳಿಗೆ ಮಧ್ಯದಲ್ಲಿರುವ ತಾಲ್ಲೂಕು ಸಿಂದಗಿ ಆಗಿದೆ. ಈಗಾಗಲೇ ನಮ್ಮ ಕ್ಷೇತ್ರದ ಜನತೆ ಹೋರಾಟಗಾರರ ಒತ್ತಡವೂ ಹೆಚ್ಚಿದೆ. ಹೀಗಾಗಿ ಸಿಂದಗಿ ಜಿಲ್ಲೆಯಾಗುವುದೇ ಸೂಕ್ತ
–ಅಶೋಕ ಮನಗೂಳಿ ಶಾಸಕ ಸಿಂದಗಿ
ದೇವರಹಿಪ್ಪರಗಿ ಕ್ಷೇತ್ರದ ವಿವಿಧ ಗ್ರಾಮಗಳ ಪ್ರಮುಖರು ಹಾಗೂ ಜನತೆಯ ಅಭಿಪ್ರಾಯದಂತೆ ಜಿಲ್ಲಾ ಕೇಂದ್ರ ಈಗಿರುವುದೇ ಒಳ್ಳೆಯದು. ಏಕೆಂದರೆ ಆಡಳಿತದ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಸ್ಥಳ ವಿಜಯಪುರವೇ ನಮಗೆ ಅತ್ಯಂತ ಹತ್ತಿರವಾಗಿದೆ.
–ರಾಜುಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ 
ಜಿಲ್ಲೆ ವಿಭಜನೆ ಈಗಿನ ಸಮಯದಲ್ಲಿ ಅಷ್ಟೊಂದು ಸೂಕ್ತ ನಿರ್ಧಾರವಾಗಲಾರದು. ಜಿಲ್ಲಾ ಕೇಂದ್ರ ಆಗಬೇಕಿದ್ದರೆ ಮುದ್ದೇಬಿಹಾಳ ಆಗಬೇಕು. ಹೀಗಾಗಿ ನಾನು ಮುದ್ದೇಬಿಹಾಳವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸುವೆ 
-ಸಿ.ಎಸ್.ನಾಡಗೌಡ ಅಪ್ಪಾಜಿ ಶಾಸಕ ಮುದ್ದೇಬಿಹಾಳ
ಕೈಜೋಡಿಸಲು ಜನರಿಗೆ ಮನವಿ
ವಿಜಯಪುರ: ಸಿಂದಗಿ ಆಲಮೇಲೆ ದೇವರಹಿಪ್ಪರಗಿ ಮತ್ತು ಚಡಚಣ ಭಾಗದ ಜನರು ಮತ್ತು ಜನಪ್ರತಿನಿಧಿಗಳು ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಕೈಜೋಡಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಜಿಲ್ಲಾ ಕೇಂದ್ರ ರಾಜಧಾನಿಯಿಂದ ದೂರ ಇರುವುದರಿಂದ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಅಭಿವೃದ್ಧಿಯಿಂದ ಬಹಳಷ್ಟು ವಂಚಿತವಾಗಿದ್ದೇವೆ. ಸತತ ಬರ ಪೀಡಿತ ಪ್ರದೇಶವಾಗಿದೆ. ಅಲ್ಲದೇ ಭೀಮಾ ತೀರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು. ಇದನೆಲ್ಲ ನಿಯಂತ್ರಿಸಿ ಅಭಿವೃದ್ಧಿಯತ್ತ ನಮ್ಮ ಪ್ರದೇಶ ಕೊಂಡೊಯ್ಯಲು ಪ್ರತ್ಯೇಕ ಜಿಲ್ಲೆ ರಚನೆಯಾಗುವುದು ಸೂಕ್ತ ಎಂದರು.  ಜಿಲ್ಲೆಯಾಗುವ ಎಲ್ಲ ಅರ್ಹತೆ ಇಂಡಿಗೆ ಇದೆ. ತಾಲ್ಲೂಕಿನಲ್ಲಿ 74 ಹಳ್ಳಿ ಇವೆ. ರೈಲ್ವೆ ಬ್ರಾಡ್‌ಗೇಜ್‌ ಇದೆ ಎರಡು ರಾಷ್ಟ್ರೀಯ ಹೆದ್ದಾರಿ ಇವೆ ಮೂಲಸೌಲಭ್ಯಗಳು ಇವೆ ಕೃಷಿ ವಿಜ್ಞಾನ ಕೇಂದ್ರ ಇದೆ ಸಕ್ಕರೆ ಕಾರ್ಖಾನೆ ಇವೆ ಲಿಂಬೆ ಅಭಿವೃದ್ಧಿ ಪ್ರಾಧಿಕಾರ ಇದೆ ಕೈಗಾರಿಕಾ ಪ್ರದೇಶ ಇದೆ. ಮಿನಿ ವಿಧಾನಸೌಧ ತಾಲ್ಲೂಕು ಆಸ್ಪತ್ರೆ ಕ್ರೀಡಾಂಗಣ ಇದೆ. ಜಿಲ್ಲೆಯಾಗಲು ಯಾವುದೇ ಕೊರತೆ ಇಲ್ಲ ಎಂದರು. ಈ ಮೊದಲು ನಮ್ಮ ಜಿಲ್ಲೆಯೂ 371 ಜೆ ಗೆ ಸೇರ್ಪಡೆಯಾಗಿದ್ದರೆ ನಮ್ಮ ಭಾಗಕ್ಕೆ ಅನುಕೂಲವಾಗುತ್ತಿತ್ತು. ಆದರೆ ಸಾಧ್ಯವಾಗಿಲ್ಲ. ಈಗಲಾದರೂ ಸೇರ್ಪಡೆಯಾದರೆ ನಮ್ಮ ಭಾಗದ ಮಕ್ಕಳ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT