ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ಖಂಡನೆ; ತೈಲ ದರ ಇಳಿಕೆಗೆ ಆಗ್ರಹ

ವಿಜಯಪುರ: ತೈಲ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸಾಯಿಬಾಬಾ ಪೆಟ್ರೋಲ್ ಪಂಪ್ ಎದುರು ‘100 ನಾಟೌಟ್’ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಲಾಯಿತು. ಜನರಿಗೆ ಹೊರೆಯಾಗುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ದರ ಕಡಿತಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಇಡೀ ದೇಶದ ಜನತೆ ಕೊರೊನಾ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆರ್ಥಿಕವಾಗಿ ಬಲಹೀನರಾಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಜನ ಬೀದಿ ಪಾಲಾಗಿದ್ದಾರೆ ಎಂದು ಹೇಳಿದರು.
ಇಂತಹ ಕಷ್ಟಕರ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿ ಲಾಭಕೋರತನದಲ್ಲಿ ನಿರತವಾಗಿದೆ. ತೈಲ ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರ ಮೇಲೆ ಪರಿಣಾಮ ಬೀರುತ್ತಿದ್ದು, ದಿನ ಬಳಕೆಯ ವಸ್ತುಗಳು ದುಬಾರಿಯಾಗಿವೆ ಎಂದರು.
ಅಡುಗೆ ಅನಿಲದ ದರ ₹ 850 ದಾಟಿದ್ದು, ದಿನ ಬಳಕೆಯ ಅಡುಗೆ ಎಣ್ಣೆ ದುಪ್ಪಟ್ಟು ಬೆಲೆಯಾಗಿದೆ. ಸಿಮೆಂಟ್, ಸ್ಟೀಲ್, ಬಟ್ಟೆ ಹೀಗೆ ಅನೇಕ ದಿನನಿತ್ಯದ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಕೇಂದ್ರ ಸರ್ಕಾರ ಇದಾವುದಕ್ಕೂ ಕಿವಿಗೊಡದೇ ತೈಲ ಬೆಲೆ ಹೆಚ್ಚಿಸಿ ಜನರ ಮೇಲೆ ಹೊರೆ ಹೊರಿಸುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಪ್, ಎಸ್.ಎಂ.ಪಾಟೀಲ(ಗಣಿಹಾರ), ಗುರನಗೌಡ ಪಾಟೀಲ, ಮಹ್ಮದ್ ರಫೀಕ್ ಟಪಾಲ, ಶ್ರೀದೇವಿ ಉತ್ಲಾಸರ, ಬಡೇಪೀರ ಜುನೇದಿ, ಶ್ರೀಕಾಂತ ಛಾಯಾಗೋಳ, ವಿದ್ಯಾರಾಣಿ ತುಂಗಳ, ಸುರೇಶ ಘೋಣಸಗಿ, ಜಮೀರ್ ಅಹ್ಮದ್ ಬಕ್ಷೀ, ಗಂಗಾಧರ ಸಂಬಣ್ಣಿ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಘಾಟಗೆ, ಅಬ್ದುಲ್ ಖಾದರ್ ಖಾದೀಮ್, ಚನ್ನಬಸಪ್ಪ ನಂದರಗಿ, ಈರಪ್ಪ ಜಕ್ಕಣ್ಣನವರ, ಮೋಹಿನ್ ಶೇಖ್, ಜಯಶ್ರೀ ಭಾರತೆ, ಸುಜಾತ ಶಿಂಧೆ, ರಾಜಶ್ರೀ ಚೋಳಕೆ, ಸರಿತಾ ಧನರಾಜ, ಮಂಜುಳಾ ಜಾಧವ, ಶಮೀಮ ಅಕ್ಕಲಕೋಟ, ಹಮೀದಾ ಪಟೇಲ, ಧನರಾಜ.ಎ, ರವೀಂದ್ರ ಜಾಧವ, ಅಸ್ಪಕ್ ಮನಗುಳಿ, ಆಸೀಫ್ ಜುನೇದಿ, ಮುಜಾಮಿಲ್ಲಾ ಬಕ್ಷಿ, ಧನಸಿಂಗ ರಾಠೋಡ, ಶಾನವಾಲೆ, ಅಜಯ ರಜಪೂತ, ಆಸೀಫ್ ಪುಂಗೀವಾಲೆ, ಹಾಪೀಜ್ ಕಲಾದಗಿ, ಆಸ್ಮ ಕಾಲೇಬಾಗ ಪಾಲ್ಗೊಂಡಿದ್ದರು.
***
ಪ್ರಧಾನಿ ನರೇಂದ್ರ ಮೋದಿ ‘ಅಚ್ಚೇ ದಿನ್’ ಎಂಬ ಸುಳ್ಳು ಭರವಸೆ ಕೊಟ್ಟು, ಜನರನ್ನು ಮೋಸ ಮಾಡಿದ್ದಾರೆ. ಜನ ಮುಂಬರುವ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ
–ರಾಜು ಆಲಗೂರ, ಅಧ್ಯಕ್ಷ
ಕಾಂಗ್ರೆಸ್ ಜಿಲ್ಲಾ ಘಟಕ, ವಿಜಯಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.