ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸಾವಿನ ನಿರೀಕ್ಷೆ ನಮ್ಮ ಪಕ್ಷದವರಿಗಿದೆ: ರಮೇಶ ಜಿಗಜಿಣಗಿ

Published 13 ಮಾರ್ಚ್ 2024, 0:08 IST
Last Updated 13 ಮಾರ್ಚ್ 2024, 0:08 IST
ಅಕ್ಷರ ಗಾತ್ರ

ವಿಜಯಪುರ: ‘ನನ್ನ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಯಲ್ಲೇ ಪ್ರಾಣ ಹೋಗುವುದೆಂದು ಬಹಳ ಜನ ಅಪಪ್ರಚಾರ ಮಾಡಿದರು. ದೆಹಲಿವರೆಗೂ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಈ ವಿಷಯ ಹೇಳಿದರು. ದೆಹಲಿಗೆ ಹೋಗಿ ಹೇಳುವ ಉದ್ದೇಶ ಏನಿತ್ತು’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.

ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನನ್ನ ಸಾವು ಅವರ ಕೈಯಲ್ಲಿದೆಯೇ? ನನ್ನ ಬಗ್ಗೆ ಇವರೆಲ್ಲ ಇಷ್ಟೊಂದು ಚಿಂತೆ ಏಕೆ ಮಾಡುತ್ತಾರೆ? ನಾನು ಬೇಗ ಸತ್ತರೆ, ಸಂಸದ ಆಗಬೇಕು ಎಂಬ ಆಸೆ ನಮ್ಮ ಪಕ್ಷದಲ್ಲೇ ಕೆಲವರಿಗಿದೆ’ ಎಂದು ಹರಿಹಾಯ್ದರು.

‘ನನ್ನ ವಯಸ್ಸು 83 ಅಥವಾ 93 ಆಗಲಿ, ನಾನು ಬದುಕೋನೆ. ದಲಿತ ರಾಜಕಾರಣಿಯಾಗಿ ಇತಿಹಾಸ ನಿರ್ಮಿಸಿಯೇ ಸಾಯಬೇಕು ಎಂದು ದೇವರು ನನ್ನ ಹಣೆಯಲ್ಲಿ ಬರೆದಿದ್ದಾನೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ಟಿಕೆಟ್‌ ನೀಡುವ ವಿಷಯದಲ್ಲಿ ಪಕ್ಷದ ನಿರ್ಣಯಕ್ಕೆ ನಾನು ಬದ್ಧ. ನನ್ನ ಬಿಟ್ಟು ಬೇರೆ ಯಾರಿಗೂ ಟಿಕೆಟ್‌ ಕೊಡಲ್ಲ ಎಂದು ಪಕ್ಷದವರು ಸ್ಪಷ್ಟವಾಗಿ ಹೇಳಿದ್ದಾರೆ. ನೀನೇನೂ ಚಿಂತೆ ಮಾಡಬೇಡ. ನೀನು ಸತ್ತರೂ ಜನ, ನಿನ್ನ ಹೆಣಕ್ಕೆ ವೋಟ್‌ ಹಾಕಲಿ ಎಂದು ಹೇಳಿದ್ದಾರೆ’ ಎಂದು ಅವರು ತಿಳಿಸಿದರು.

‘ಸಂಸತ್‌ ಅಧಿವೇಶನದಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಒಂದೂ ಪ್ರಶ್ನೆ ಕೇಳಿಲ್ಲ ಎಂದು ಅನೇಕರು ನನ್ನನ್ನು ಟೀಕಿಸಿದ್ದಾರೆ. ಆದರೆ, ನನ್ನ ಬೇಡಿಕೆ ಪತ್ರಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರುವಾಗ ನಾನೇಕೆ ಪ್ರಶ್ನೆ ಕೇಳಬೇಕು’ ಎಂದರು.

70 ವರ್ಷದ ನನ್ನ ಜೀವನದಲ್ಲಿ ಅಡ್ಡ ಬಂದವರು ಯಾರೂ ಬದುಕಿಲ್ಲ. ನನ್ನ ಕಾಡಿದವರು ಒಬ್ಬರೂ ಉಳಿದಿಲ್ಲ. ಉಳಿಯುವುದೂ ಇಲ್ಲ ದೇವರೇ ಖಲಾಸ್‌ ಮಾಡುತ್ತಾನೆ.
–ರಮೇಶ ಜಿಗಜಿಣಗಿ ಸಂಸದ
‘ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು’
ವಿಜಯಪುರ: ‘ನಾನು ಲಿಂಗಾಯತ ವಿರೋಧಿ ಎಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಆರೋಪಿಸಿರುವರ ನಾಲಿಗೆ ಕತ್ತರಿಸಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು. ‘45 ವರ್ಷಗಳಿಂದ ನನ್ನನ್ನು ನೀವು ಹತ್ತಿರದಿಂದ ನೋಡಿದ್ದೀರಿ. ಲಿಂಗಾಯತ ವಿರೋಧಿ ಎನ್ನಲು ನಿಮಗೆ ಮನುಷತ್ವ ಇಲ್ಲವೇ? ಪತ್ರಕರ್ತರು ಯೋಚನೆ ಮಾಡಿ ಸುದ್ದಿ ಬರೆಯಬೇಕು. ಲಿಂಗಾಯತ ವಿರೋಧಿಯೆಂದು ಯಾರೋ ಹೇಳಿದ ತಕ್ಷಣ ಅದನ್ನು ಪ್ರಸಾರ ಮಾಡುವುದು ಸರಿಯಲ್ಲ’ ಎಂದರು. ‘ನಾನು ಎಂದಿಗೂ ನನ್ನ ಸಮಾಜವನ್ನು ಕೊರಳಿಗೆ ಕಟ್ಟಿಕೊಂಡು ಹೋಗಿಲ್ಲ. ನಾನು ಲಿಂಗಾಯತರ ವಿರೋಧ ಕಟ್ಟಿಕೊಂಡಿದ್ದರೆ ಚಿಕ್ಕೋಡಿ ವಿಜಯಪುರದಿಂದ ಲೋಕಸಭೆಗೆ ಸತತ ಗೆಲ್ಲಲು ಆಗುತ್ತಿರಲಿಲ್ಲ. ಮುಂದುವರಿದ ಸಮಾಜದ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನನ್ನ ಸಮಾಜಕ್ಕೆ ತೋರಿಸಿಕೊಟ್ಟಿದ್ದೇನೆ’ ಎಂದರು. ‘ಬ್ರಾಹ್ಮಣರು ಲಿಂಗಾಯತರು ಸೇರಿ ಮೇಲ್ವರ್ಗದ ಜನರು ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ನಾನೂ ಅಷ್ಟೇ ಆ ಸಮಾಜಗಳಿಗೆ ವಿಧೇಯನಾಗಿ ಇದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT