ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೊಟದ ವಸ್ತಿಯಲ್ಲಿ ಪಾಳುಬಿದ್ದ ಕೊಳವೆಬಾವಿಗೆ ಬಿದ್ದಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಾಲಕನ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ.
ಲಚ್ಯಾಣ ಗ್ರಾಮದ ಸತೀಶ ಮುಜಗೊಂಡ ಅವರ ಪುತ್ರ ಸಾತ್ವಿಕ್ (14 ತಿಂಗಳು) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಅಂದಾಜು 16 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕ್ಯಾಮೆರಾವನ್ನು ಕೊಳವೆಬಾವಿಯೊಳಗೆ ಇಳಿ ಬಿಟ್ಟು ಬಾಲಕನ ಸ್ಥಿತಿಗತಿ ಮೇಲೆ ನಿಗಾ ವಹಿಸಲಾಗಿದೆ. ಬಾಲಕ ಕೈ, ಕಾಲು ಅಲುಗಾಡಿಸುತ್ತಿರುವುದು ಕ್ಯಾಮೆರಾದಲ್ಲಿ ಗೋಚರಿಸುತ್ತಿದ್ದು, ಬಾಲಕನ ಉಸಿರಾಟಕ್ಕೆ ಆಮ್ಲಜನಕ(ಆಕ್ಸಿಜನ್)ವನ್ನು ಪೈಪ್ ಮೂಲಕ ವೈದ್ಯರು ಪೂರೈಸುತ್ತಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ರಾತ್ರಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಿಧಾನವಾಗಿದೆ. ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಬಾಲಕನ ರಕ್ಷಣೆಗಾಗಿ ಕೊಳವೆಬಾವಿಗೆ ಸಮಾನಾಂತರವಾಗಿ ಪಕ್ಕದಲ್ಲೇ ಜೆಸಿಬಿ ಯಂತ್ರದ ಮೂಲಕ ಗುಂಡಿ ತೋಡಿ, ಮಣ್ಣನ್ನು ಹೊರ ತೆಗೆಯಲಾಗುತ್ತಿದೆ.