ಇಂಡಿ: ಸಂತ ಸೇವಾಲಾಲರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದು ಇಂಗ್ಲಿಷ್ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲ್ಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಜಯಂಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಿಯಬೇಕು ಕಲಿತದ್ದನ್ನು ಇತರರಿಗೂ ಕಲಿಸಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನೆಡಸಿ ಉದ್ಧರಿಸಬೇಕು ಎಂಬ ಸಂತ ಸೇವಾಲಾಲ ಅವರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕಿ ಎಸ್.ಎಚ್. ಮೈದರಗಿ ಮಾತನಾಡಿ, ಬದುಕಿನಲ್ಲಿ ನಿರ್ಮಲವಾದ ನಡೆ– ನುಡಿಯನ್ನು ಅನುಸರಿಸಬೇಕು. ಮಾನವ ತನ್ನ ಬದುಕಿನ ಬಗೆಗೆ ನಿತ್ಯ ಯೋಚಿಸಬೇಕು. ಹಸಿವು, ತೃಷೆ, ಶೋಕ, ಮೋಹ ಮತ್ತು ಮಮಕಾರಗಳನ್ನು ತಿಳಿದು, ಬದುಕು ಹಸನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಮಾತನಾಡಿ, ಜನರಲ್ಲಿರುವ ಮಿಥ್ಯಾಚರಣೆಗಳನ್ನು ತೊಲಗಿಸಿ, ಅವರ ಬದುಕನ್ನು ಉದ್ಧರಿಸಿದ ಕಾಲಜ್ಞಾನಿ ಸೇವಾಲಾಲರು ಎಂದರು. ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಈ ಮಹಾನುಭಾವರ ಸತ್ಕಾರ್ಯಗಳೇ ಕಾರಣ ಎಂದು ಹೇಳಿದರು.
ಶಿಕ್ಷಕರಾದ ಎಸ್.ಎಸ್. ಅರಬ್, ಎನ್.ಬಿ. ಚೌಧರಿ, ಎಸ್.ಎಚ್. ಹೆಬ್ಬಾಳ, ಎಸ್. ಪಿ. ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.