ವಿಜಯಪುರ: ಅನಾರೋಗ್ಯದಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ನಿನ್ನೆ ತಡ ರಾತ್ರಿ ನಿಧನರಾಗಿರುವ ಸಿಂದಗಿಯ ಜೆಡಿಎಸ್ ಹಿರಿಯ ಎಂ.ಸಿ.ಮನಗೂಳಿ( 85) ಅವರ ಅಂತ್ಯಕ್ರಿಯೆ ಜ.29ರಂದು ಬೆಳಿಗ್ಗೆ 11ಕ್ಕೆ ಸಿಂದಗಿ ಪಟ್ಟಣದಲ್ಲಿ ನೆರವೇರಲಿದೆ.
ಬೆಂಗಳೂರಿನ ಅಪೋಲೊ ಆಸ್ಪತ್ರೆಯಿಂದ ರಸ್ತೆ ಮೂಲಕ ಮನಗೂಳಿ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಸಿಂದಗಿ ತಲುಪುವ ಸಾಧ್ಯತೆ ಇದೆ. ಆರಂಭದಲ್ಲಿ ಶಾಸಕರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಕುಟುಂಬದವರ ಹಾಗೂ ಸಂಬಂಧಿಕರ ದರ್ಶನಕ್ಕೆ ಇಡಲಾಗುವುದು, ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳಿಯಲ್ಲಿ(ಎಚ್.ಜಿ.ಕಾಲೇಜ್) ಇಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 11ಕ್ಕೆ ಶಿಕ್ಷಣ ಸಂಸ್ಥೆಯ ಆವರಣದಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ, ಪರಸ್ಪರ ಅಂತರವನ್ನು ಕಾಪಾಡಿಕೊಂಡು ಹಾಗೂ ಕನಿಷ್ಠ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಅಂತಿಮ ಸಂಸ್ಕಾರ ನೆರವೇರಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅವರಿಗೆ ಪತ್ನಿ ಸಿದ್ದಮ್ಮ, ಪುತ್ರರಾದ ಡಾ. ಅರವಿಂದ ಮನಗೂಳಿ, ಅಶೋಕ ಮನಗೂಳಿ, ಡಾ. ಶಾಂತವೀರ ಮನಗೂಳಿ ( ಸಿಂದಗಿ ಪುರಸಭೆ ಅಧ್ಯಕ್ಷ), ಡಾ. ಚನ್ನವೀರ ಮನಗೂಳಿ ಹಾಗೂ ಪುತ್ರಿ ಅನ್ನಪೂರ್ಣ ನಿಡೋಣಿ ಇದ್ದಾರೆ.