ದೇವರಹಿಪ್ಪರಗಿ: ತಾಲ್ಲೂಕಿನ ಜಾಲವಾದ ಗ್ರಾಮದ ವಿಜೇತಾ ಭೀಮಸೇನ ಹೊಸಮನಿ 2023ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 100ನೇ ಸ್ಥಾನ ಪಡೆಯುವ ಮೂಲಕ ವಿಶಿಷ್ಠ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸದ್ಯ ಹುಬ್ಬಳ್ಳಿ ನಿವಾಸಿಯಾಗಿರುವ ವಿಜೇತಾ ಹೊಸಮನಿ 2019ರಿಂದ ಸತತ 3 ಬಾರಿ ಯುಪಿಎಸ್ಸಿ ಪರೀಕ್ಷೆಗೆ ಕುಳಿತು ನಾಲ್ಕನೇ ಬಾರಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದರು. ಮಗಳ ಸಾಧನೆಗೆ ತಂದೆ ಭೀಮಸೇನ ಹೊಸಮನಿ ಸಂತಸ ವ್ಯಕ್ತಪಡಿಸಿದರು.
‘ಮಗಳು ವಿಜೇತಾ ಎಲ್ಕೆಜಿಯಿಂದ 5 ನೇ ತರಗತಿವರೆಗೆ ವಿಜಯಪುರದ ಶಿಶುನಿಕೇತನ, 6ನೇ ತರಗತಿಯಿಂದ 10ನೇ ತರಗತಿ ವರೆಗೆ ಬಾಗಲಕೋಟೆ ಬಸವೇಶ್ವರ ಇಂಟರ್ನ್ಯಾಷನಲ್ ಸ್ಕೂಲ್, ಪಿಯುಸಿ ಪ್ರಥಮ ವರ್ಷವನ್ನು ತುಂಗಳ ಕಾಲೇಜು, ದ್ವೀತಿಯ ವರ್ಷ ವಿ.ಭ ದರಬಾರ ಕಾಲೇಜ್ ನಂತರ ಪದವಿ ಹಾಗೂ ಕಾನೂನು ಪದವಿಯನ್ನು ಗುಜರಾತ್ ರಾಷ್ಟ್ರೀಯ ಕಾನೂನು ವಿ.ವಿಯಲ್ಲಿ ಮುಗಿಸಿದ್ದಾಳೆ’ ಎಂದರು.
‘ಗುಜರಾತ್ ಕಾನೂನು ವಿ.ವಿಯಲ್ಲಿ ಅಧ್ಯಯನದ ಸಮಯದಲ್ಲಿ ಕ್ರಿಮಿನಲ್ ಲಾ ದಲ್ಲಿ ಚಿನ್ನದ ಪದಕ ಪಡೆದರು. ಇದೇ ಸಮಯದಲ್ಲಿ 14ನೇ ಬ್ಯಾಚ್ನಲ್ಲಿ ಆದಿತ್ಯಾ ಬಿರ್ಲಾ ಅವಾರ್ಡ್ ದೊರೆಯಿತು. ಈ ಮೂಲಕ ವಾರ್ಷಿಕ ₹1.80 ಲಕ್ಷ ಸ್ಕಾಲರ್ಶಿಪ್ ಅನ್ನು 5 ವರ್ಷಗಳ ವರೆಗೆ ಪಡೆದರು’ ಎಂದು ತಿಳಿಸಿದರು.
ವಿಜೇತಾ ಅವರ ತಾಯಿ ಶಶಿಕಲಾ ನಾರಾಯಣರಾವ್ ಮುಳಗುಂದ. ತಾಯಿ– ತಂದೆ ಇಬ್ಬರೂ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಹೋದರ ವಿಕ್ರಮ ಹೊಸಮನಿ ಐಐಎಂ ಅಹಮದಾಬಾದ್ನ ಎಂಬಿಎ ಮಾಡಿ ಈಗ ಅಮೇಜಾನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜತಾ ಅವರು ತಮ್ಮ ಸಾಧನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘2019ರಿಂದ ಆನ್ಲೈನ್ ತರಬೇತಿ ಹಾಗೂ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಸತತ ಅಧ್ಯಯನ ಹಾಗೂ ದೈನಂದಿನ ವಿಷಯಗಳಿಗಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಿದ್ದೆ. 2022ರಲ್ಲಿ ಯುಪಿಎಸ್ಸಿಯಲ್ಲಿ ರಾಷ್ಟ್ರಕ್ಕೆ 14ನೇ ರ್ಯಾಂಕ್ ಪಡೆದ ಕಾರ್ತಿಕಾ ಗೋಯೆಲ್ ಸಾಧನೆಯಿಂದ ಸ್ಪೂರ್ತಿಗೊಂಡು 2023ರಲ್ಲಿ ಈ ಗುರಿ ತಲುಪಿದೆ’ ಎಂದರು.