ಆಲಮಟ್ಟಿ: ಆಲಮಟ್ಟಿ ಸುತ್ತಮುತ್ತಲಿನ ಪರಿಸರದಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಮಿಕರ ಸುಮಾರು ಎರಡು ದಶಕಗಳ ಪ್ರಾಮಾಣಿಕ ಶ್ರಮದ ಕಾರಣ ನಾನಾ ಉದ್ಯಾನಗಳು ಅರಳುವುದರ ಜತೆ ಹಸರೀಕರಣಕ್ಕೆ ಕಾರಣವಾಗಿವೆ ಎಂದು ಕೆಬಿಜೆೆಎನ್ಎಲ್ ಅರಣ್ಯ ವಿಭಾಗದ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಹೇಳಿದರು.
ಅಲಮಟ್ಟಿಯ ಸಸ್ಯ ಪಾಲನಾ ನರ್ಸರಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನದ 24 ಗಂಟೆಯೂ ವಿವಿಧ ರೀತಿಯ ಕಾರ್ಮಿಕರ ಶ್ರಮ, ಕೆಲಸದ ಪರಿಣಾಮ ನಾವು ಸುಖವಾಗಿದ್ದೇವೆ. 20ನೇ ಶತಮಾನದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವದಿಂದಾಗಿ ಭಾರತದಲ್ಲಿಯೂ ಈ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕಾರ್ಮಿಕ ದಿನದ ಇತಿಹಾಸ, ಬೆಳವಣಿಗೆ, ಅದರ ಹಿನ್ನಲೆ ಕುರಿತು ವಿವರಿಸಿದರು.
ಆರ್.ಎಂ.ಜಿ.ಎಫ್.ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ದಿನವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಅಹಮದಾಬಾದ್ ಹತ್ತಿ ಗಿರಣಿ ಮಾಲೀಕರ ವಿರುದ್ಧ ಸತ್ಯಾಗ್ರಹ ಶುರುಮಾಡಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿದರು ಎಂದು ಹೇಳಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಮಿಕ ಮುಖಂಡರಾದ ವಿರೂಪಾಕ್ಷಿ ಮಾದರ, ಬಸವರಾಜ್ ಗುಡಿಮನಿ, ದ್ಯಾಮಣ್ಣ ಬಿರಾದಾರ, ಭೀಮಶಿ ನಾಯಕ, ಯಶೋಧಾ ಗಾರೇಗೋಳ, ಗಸ್ತು ಅರಣ್ಯ ಪಾಲಕರಾದ ಅಶೋಕ ಕಾಳೆ, ನಾಗಪ್ಪ ಹಯ್ಯಾಳಪ್ಪ, ಪ್ರವೀಣಕುಮಾರ ಹಚ್ಯಾಳಕರ , ಈರಯ್ಯ ಹಳ್ಳಿಮಠ ಮತ್ತೀತರರು ಇದ್ದರು.
ಪ್ರವಾಸಿಗರಿಗೆ ನಿರಾಶೆ: ಕಾರ್ಮಿಕರ ದಿನಾಚರಣೆ ಅಂಗವಾಗಿ ಆಲಮಟ್ಟಿಯ ಎಲ್ಲಾ ಉದ್ಯಾನಗಳನ್ನು ಬುಧವಾರ ಬಂದ್ ಮಾಡಲಾಗಿತ್ತು. ಈ ಬಗ್ಗೆ ಪೂರ್ವಮಾಹಿತಿಯಿಲ್ಲದೆ ದೂರದಿಂದ ನಾನಾ ಕಡೆಯಿಂದ ಬಂದಿದ್ದ ಪ್ರವಾಸಿಗರು ನಿರಾಶೆ ಅನುಭವಿಸಿದರು. ಈಗ ಬೇಸಿಗೆಯ ರಜೆಯ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಭೇಟಿ ನೀಡುತ್ತಿದ್ದಾರೆ. .
ಆಲಮಟ್ಟಿಯ ನರ್ಸರಿಯಲ್ಲಿ ಕಾರ್ಮಿಕರೊಂದಿಗೆ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು