ವಿಜಯಪುರ: ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ನಿಗದಿತ ಸಮಯಕ್ಕಿಂತ ಎರಡೂವರೆ ತಾಸು ವಿಳಂಬವಾಗಿ ಜಿಲ್ಲೆಗೆ ಆಗಮಿಸಿತು.
ಪೂರ್ವ ನಿರ್ಧರಿತ ಸಮಯಕ್ಕೆ ತಂಡ ಬಾರದೇ ಇರುವುದರಿಂದ ಅಧಿಕಾರಿಗಳು, ರೈತರು, ಎನ್ಆರ್ಇಜಿ ಕೂಲಿಕಾರ್ಮಿಕರು, ಮಾಧ್ಯಮದವರು ಹೊಲದಲ್ಲೇ ಕಾಯುವಂತಾಯಿತು.
ಬಬಲೇಶ್ವರ ಮತ್ತು ಇಂಡಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಹೊಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ನಷ್ಠಕ್ಕೆ ಒಳಗಾಗಿರುವ ತೊಗರಿ, ಜೋಳ, ಕಬ್ಬು, ಸೂರ್ಯಕಾಂತಿ, ಲಿಂಬೆ ಹೊಲವನ್ನು ವೀಕ್ಷಿಸಿ, ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಂಜೆ 7ರ ಬಳಿಕವೂ ಬರ ಅಧ್ಯಯನ ತಂಡ ಇಂಡಿ ತಾಲ್ಲೂಕಿನ ಕಪ್ಪನಿಂಬರಗಿ ಗ್ರಾಮದ ರೈತರ ಲಿಂಬೆ ತೋಟಕ್ಕೆ ಭೇಟಿ ನೀಡಿ ಬ್ಯಾಟರಿ ಬೆಳಕಿನಲ್ಲಿ ಪರಿಶೀಲಿಸಿದ್ದು, ವಿಶೇಷವಾಗಿತ್ತು.
ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕೇಂದ್ರ ತಂಡವು ರಾತ್ರಿ 8 ಗಂಟೆಗೆ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬರದ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು.