ವಿಜಯಪುರ: ನಗರವು ದೇವಗಿರಿ ಯಾದವರ ಕಾಲಕ್ಕೆ ದಕ್ಷಿಣ ವಾರಣಾಸಿ ಎಂದು ಕರೆಯಲ್ಪಡುತ್ತಿತ್ತು. ಇದು ಐತಿಹಾಸಿಕ ಪರಂಪರೆ ಹಾಗೂ ಮಹತ್ವವನ್ನು ಎತ್ತಿ ತೋರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ನರಸಿಂಹ ದೇವಸ್ಥಾನದಲ್ಲಿ ನರಸಿಂಹದೇವ ಟ್ರಸ್ಟ್ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗಮೇಶ ಕಲ್ಯಾಣಿ ಅವರ ‘ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ನಗರದಲ್ಲಿ ಎಲ್ಲಿಯೇ ಉತ್ಖನನ ಮಾಡಿದರೂ ಪುರಾತನ ಲಕ್ಷ್ಮಿ, ಗಣಪತಿ, ಗಂಗೆ, ಗೌರಿ, ಹನುಮಾನ ಹಾಗೂ ನರಸಿಂಹ ದೇವರ ವಿಗ್ರಹಗಳು ಸಿಗುತ್ತವೆ. ಇಲ್ಲಿರುವ ಶಾಸನಗಳು, ಶಿಲಾ ಲಾಂಛನಗಳು ಹಾಗೂ ಐತಿಹಾಸಿಕ ಶಿಲ್ಪಗಳು ನಗರದ ಗತ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಗ್ರಂಥ ಬರೆದಿರುವ ಸಂಗಮೇಶ ಕಲ್ಯಾಣಿ ಹಾಗೂ ಪ್ರಕಾಶನ ಮಾಡಿದ ನರಸಿಂಹ ದೇವರ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಉಪನ್ಯಾಸಕ ಸಂಗಮೇಶ ಕಲ್ಯಾಣಿ, ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಮಾತನಾಡಿದರು.