ವಿಜಯಪುರ: ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ ಅವರ ಕಾರಿಗೆ ನಗರದ ಹೊರ ವಲಯದ ಕನ್ನಾಳ ಕ್ರಾಸ್ ಹತ್ತಿರ ನ.2ರಂದು ಟಿಪ್ಪರ್ ಡಿಕ್ಕಿ ಹೊಡೆಸಿ ಬಳಿಕ ಗುಂಡಿನ ದಾಳಿ ನಡೆಸುವ ಮೂಲಕ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಗುರುವಾರ ಮತ್ತೆ ಮೂವರನ್ನು ಬಂಧಿಸಿದೆ.
ಇಂಡಿ ತಾಲ್ಲೂಕಿನ ದೇಗಿನಾಳದ ಸಂಘರ್ಷ ಸೂರ್ಯವಂಶಿ(23), ಉಮರಾಣಿಯ ಸಂಗಪ್ಪ ಯಮದೆ(35) ಮತ್ತು ವಿಜಯಪುರ ಜಲನಗರದ ಚೇತನ ಶಿರಶ್ಯಾಡ(30) ಬಂಧಿತ ಆರೋಪಿಗಳಾಗಿದ್ದಾರೆ.
ಶೂಟೌಟ್ ಪ್ರಕರಣದಲ್ಲಿ ಆರೋಪಿಗಳು ಬಳಸಿದ್ದ ಒಂದು ಬೈಕ್, ಎರಡು ಮೊಬೈಲ್ ಹಾಗೂ ಒಂದು ಏರ್ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 19 ಜನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.