ವಿಜಯಪುರ: ಮಹಾರಾಷ್ಟ್ರ ರಾಜ್ಯಕ್ಕೆ ಹೊಂದುಕೊಂಡಿರುವ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಜಾರಿಗೊಳಿಸಲಾಗಿರುವ ವಾರಾಂತ್ಯ ಕರ್ಫ್ಯೂ ನೆಪ ಮಾತ್ರಕ್ಕೆ ಎಂಬಂತಾಗಿದೆ.
ವಾಣಿಜ್ಯ, ವ್ಯಾಪಾರ ಚಟುವಟಿಕೆ ಬಂದ್ ಹೊರತು ಪಡಿಸಿದರೆ ನಗರ ವ್ಯಾಪ್ತಿಯಲ್ಲಿಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಜನ, ವಾಹನ ಸಂಚಾರ, ಬೀದಿ ಬದಿ ವ್ಯಾಪಾರ, ಸಂತೆಗಳು ಎಂದಿನಂತೆ ನಡೆದಿವೆ.
ಅನಗತ್ಯ ಸಂಚಾರಕ್ಕೆ ಪೊಲೀಸರು ಕಡಿವಾಣ ಹಾಕದ ಪರಿಣಾಮ ಜನರು ಎಂದಿನಂತೆ ವ್ಯಾಪಾರ, ವಹಿವಾಟಿನಲ್ಲಿತೊಡಗಿರುವ ಹಾಗೂ ಮನಸೋ ಇಚ್ಛೆ ಸುತ್ತಾಡುವ ದೃಶ್ಯ ಶನಿವಾರ ಎಲ್ಲೆಡೆ ಕಂಡುಬಂದಿತು.
ಮಧ್ಯಾಹ್ನ 2 ಗಂಟೆಯೆ ಬಳಿಕವೂ ಅಲ್ಲಲ್ಲಿ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದ ವ್ಯಾಪಾರಿಗಳು, ಜನರನ್ನು ಪೊಲೀಸರು ಚದುರಿಸಿದರೂ ಅವರು ಸ್ಥಳದಿಂದ ಮರೆಯಾಗುತ್ತಿದ್ದಂತೆ ಯಥಾ ಪ್ರಕಾರ ಜನರು ವ್ಯಾಪಾರ, ವಹಿವಾಟಿನಲ್ಲಿ ತೊಡಗುವುದು ಸಾಮಾನ್ಯವಾಗಿದೆ.
ನಗರದ ಮುಖ್ಯ ಮಾರುಕಟ್ಟೆ, ಬಸ್ ನಿಲ್ದಾಣದ ವ್ಯಾಪ್ತಿ ಹೊರತು ಪಡಿಸಿದರೆ ಜನವಸತಿ ಪ್ರದೇಶಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಅಂಗಡಿ,ಮಳಿಗೆಗಳು ದಿನಪೂರ್ತಿ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗುತ್ತಿದ್ದಾರೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ನಗರದಲ್ಲಿ ಜನರು ಮಾಸ್ಕ್ ಧರಿಸಿದೇ, ಪರಸ್ಪರ ಅಂತರ ಕಾಪಾಡದೇ ಅಂಗಡಿ, ಮಳಿಗೆಗಳಲ್ಲಿ, ಕಚೇರಿಗಳಲ್ಲಿ, ಬೀದಿಗಳಲ್ಲಿ ಸುತ್ತಾಡುವುದು ಕಂಡುಬರುತ್ತಿದ್ದರೂ ದಂಡ ವಿಧಿಸುವ ಗೋಜಿಗೆ ಪೊಲೀಸರು, ಮಹಾನಗರ ಪಾಲಿಕೆ ಸಿಬ್ಬಂದಿ ಆದ್ಯತೆ ಕೊಡುತ್ತಿಲ್ಲ.