ಮುದ್ದೇಬಿಹಾಳ: ‘ಒಂದು ಒಳ್ಳೆಯ ಕೆಲಸ ಮಾಡಲು ನೂರೆಂಟು ವಿಘ್ನಗಳು ಬರುತ್ತವೆ. ಅವನ್ನೆಲ್ಲ ದಾಟಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ’ ಎಂದು ಜಾಲಹಳ್ಳಿ ಬೃಹನ್ಮಠದ ಜಯಶಾಂತಲಿಂಗೇಶ್ವರ ಶಿವಾ ಚಾರ್ಯರು ನುಡಿದರು.
ಅವರು ಭಾನುವಾರ ಕೇಸಾಪುರ ಗ್ರಾಮವನ್ನು ತಾಲ್ಲೂಕು ಆಡಳಿತವು ಸಾರಾಯಿ ಮುಕ್ತ ಗ್ರಾಮ ಎಂದು ಘೋಷಿಸುವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಸಾರಾಯಿ ಗ್ರಾಮೀಣ ಜನತೆಯ ಸಮಸ್ಯೆಗೆ ಕಾರಣವಾಗಿದೆ, ಆರೋಗ್ಯ, ಮನೆಯ ನೆಮ್ಮದಿ, ಬಡತನ, ಸಾಮಾಜಿಕವಾಗಿ ಅಶಾಂತಿ ಉಂಟಾಗಲು ಕಾರಣವಾಗಿದೆ. ಗ್ರಾಮಸ್ಥರು ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎಂಬುದನ್ನು ಇಲ್ಲಿ ಉದಾಹರಿಸಬಹುದು. ಈ ಗ್ರಾಮ ಸುಧಾರಣೆಯ ಹಾಗೂ ಒಗ್ಗಟ್ಟಿನ ಮಂತ್ರಕ್ಕೆ ಗ್ರಾಮದ ಹಿರಿಯರಾದ ಎಂ.ಎಸ್.ದೇಶಮುಖ ನೇತೃತ್ವ ವಹಿಸಿದ್ದು, ತಹಶೀಲ್ದಾರ್ ಸಿ.ಲಕ್ಷ್ಮಣ ಮತ್ತು ಅವರ ಸಹೊದ್ಯೋಗಿಗಳು ಸಾಥ್ ನೀಡಿದ್ದು ಒಳ್ಳೆಯ ಬೆಳವಣಿಗೆ. ಇಂಥ ಉತ್ತಮ ಸಮಾಜ ನಿರ್ಮಾಣ ಮಾಡುವ ಕೆಲಸ ರಾಜ್ಯದ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಾಧರ ನಾಡಗೌಡ, ತಹಶೀಲ್ದಾರ್ ಸಿ.ಲಕ್ಷ್ಮಣ, ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್.ಮಾಗಿ ಮಾತನಾಡಿದರು.
ಗ್ರಾಮದ ಹಿರಿಯರಾದ ಎಂ.ಎಸ್. ದೇಶಮುಖ(ತಾತಾಸಾಹೇಬ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಡಾ.ಎಸ್.ಸಿ.ಚೌಧರಿ, ಸಿ.ಆರ್.ಪೊಲೀಸ್ ಪಾಟೀಲ, ಬಸವನ ಬಾಗೇವಾಡಿ ಸಿ.ಡಿ.ಪಿ.ಒ. ಶ್ಯಾಮಲಾ ಬಾಗೇವಾಡಿ, ಉಪನ್ಯಾಸಕ ಎಸ್.ಎಸ್.ಹೂಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ತಳವಾರ, ಪಿ.ಡಿ.ಒ. ಅಯ್ಯಪ್ಪ ಮಲಗಲದಿನ್ನಿ, ಕೆ.ಎಸ್.ಗೂಳಿ, ಎಂ.ಎ.ಗೂಳಿ, ಎಂ.ಜಿ.ಹಿರೇಗೌಡರ, ಎಸ್.ಎಸ್.ಬೆಳಗಲ್ಲ ಉಪಸಿ್ಥತರಿದ್ದರು. ಜಿ.ಎಸ್.ದೇಶಮುಖ ಸ್ವಾಗತಿಸಿದರು. ವೈ.ಬಿ.ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಂ.ಹಡಪದ ನಿರೂಪಿಸಿದರು. ಶಾಂತಗೌಡ ನಾಡಗೌಡ ವಂದಿಸಿದರು.