ಭೀಮಾ ನದಿಯ ಪ್ರವಾಹ ಏರುಮುಖವಾಗಿರುವುದರಿಂದ ನದಿ ದಂಡೆಯ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಬೆಳೆದು ನಿಂತ ಭತ್ತ, ಹತ್ತಿ ಬೆಳೆ ಸಂಕಷ್ಟಕ್ಕೆ ಸಿಲುಕುವ ಭೀತಿ ರೈತರನ್ನು ಕಾಡುತ್ತಲಿದೆ. ಅಲ್ಲದೆ ತಗ್ಗು ಪ್ರದೇಶದ ಗ್ರಾಮಗಳಿಗೆ ನೀರು ಒಕ್ಕರಿಸುವ ಹೆದರಿಕೆ ಜನತೆಯನ್ನು ಕಾಡುತ್ತಲಿದೆ. ನದಿಯ ದಂಡೆಯ ಬಳಿ ಸ್ಥಾಪಿಸಿರುವ ವಿದ್ಯುತ್ ಪೈಪು, ವಿದ್ಯುತ್ ಪರಿವರ್ತಕ ಯಂತ್ರ (ಟಿ.ಸಿ) ಮಳೆಯಿಂದ ಹಾಗೂ ಹೆಚ್ಚು ನೀರು ಸಂಗ್ರಹದಿಂದ ಹಾನಿಯಾಗುತ್ತವೆ. ಅಲ್ಲದೆ ವಿದ್ಯುತ್ ಕಂಬ ಹಾಗೂ ವೈರ್ ಕಳಚಿ ಬೀಳುವ ಭೀತಿ ಎದುರಾಗಿದೆ. ಕುಡಿಯುವ ನೀರು ವಿದ್ಯುತ್ ಸ್ಥಗಿತ ಮುಂತಾದ ಒಂದಿಲ್ಲ ಒಂದು ಸಮಸ್ಯೆಗಳು ಎದುರಾಗಿವೆ ಎಂದು ಭೀಮಾ ನದಿ ದಂಡೆಯ ಜನತೆ ತಿಳಿಸಿದ್ದಾರೆ.