ಯಾದಗಿರಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮಿನ ಭತ್ತ ಖರೀದಿಯ 5 ನೋಂದಣಿ ಕೇಂದ್ರಗಳನ್ನು ಆರಂಭಿ ಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯ.ಆರ್, ತಿಳಿಸಿದರು.
ಶುಕ್ರವಾರ ಜರುಗಿದ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಎಪಿಎಂಸಿಗಳಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭಿಸುತ್ತಿದ್ದು, ಬೇಡಿಕೆ ಕಾರಣ ನಾಯ್ಕಲ್ ಹಾಗೂ ವಡಗೇರಾ ಗಳಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಆದೇಶಿಸಿದೆ. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ ₹1,868 ಹಾಗೂ ಗ್ರೇಡ್-ಎ ತಳಿಯ ಭತ್ತ ಪ್ರತಿ ಕ್ವಿಂಟಲ್ಗೆ ₹ 1,888 ಬೆಲೆ ನಿಗದಿ ಮಾಡಲಾಗಿದೆ. ನ.30ರಿಂದ ಡಿ.30ರವರೆಗೆ ರೈತರು ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ನೋಂದಾಯಿತ ರೈತರಿಗೆ ಇಲಾಖೆಯು ಎಸ್ಎಂಎಸ್ ಮೂಲಕ ಮಾಹಿತಿ ನೀಡಲಿದೆ. ಗಿರಣಿಗಳಿಗೆ ಭತ್ತದ ಮಾದರಿ ನೀಡಿ, ಪ್ರತಿ ರೈತನಿಂದ ಗರಿಷ್ಠ 40 ಕ್ವಿಂಟಲ್ ಖರೀದಿ ಮಾಡಲಾಗುವುದು. ಸಂಗ್ರಹಣಾ ಏಜೆನ್ಸಿಯ ಗುಣಮಟ್ಟ ಪರಿಶೀಲನಾ ಧಿಕಾರಿಯ ದೃಢೀಕರಣದ ನಂತರವೇ ಖರೀದಿ ನಡೆಯಲಿದೆ ಎಂದರು
ಭತ್ತ ತಂದ ರೈತರಿಗೆ ಗಿರಣಿಗಳು ಕ್ವಿಂಟಲ್ ಚೀಲಕ್ಕೆ ₹ 6 ನೀಡಬೇಕು. ಭತ್ತವನ್ನು ರೈತರಿಂದ ಪಡೆದ ನಂತರ ಆನ್ಲೈನ್ನಲ್ಲಿ ನಮೂದಿಸಬೇಕು. ರೈತರಿಂದ ಪಡೆದ ಭತ್ತದ ವಿವರ ಪಡೆದ 3 ದಿನಗಳಲ್ಲಿ ಏಜೆನ್ಸಿಗಳು ರೈತರಿಗೆ ಹಣ ಪಾವತಿಸಬೇಕು ಎಂದರು.
ಜಿಲ್ಲೆಯಲ್ಲಿನ 32 ಅಕ್ಕಿ ಗಿರಿಣಿಗಳಲ್ಲಿ ಸಧ್ಯ ಕಾರ್ಯನಿರ್ವಹಿಸುತ್ತಿರುವ ಗಿರಣಿಗಳನ್ನು ಗುರುತಿಸಿ ಮಾಹಿತಿ ನೀಡಬೇಕು. ಭತ್ತ ಖರೀದಿಯ ಕುರಿತು ರೈತರೆಲ್ಲರಿಗೂ ಮಾಹಿತಿ ತಲುಪುವಂತೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಆಹಾರ ಮತ್ತು ನಾಗರೀಕ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಮಮದಾಪುರ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಆಹಾರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಶಿವಾಜಿ, ಎ.ಡಿ.ಭೀಮರಾಯ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರ ಇಲಾಖೆ, ಯಾದಗಿರಿ, ಶಹಾಪುರ ಹಾಗೂ ಸುರಪುರ ಎಪಿಎಂಸಿ ಕಾರ್ಯದರ್ಶಿಗಳು ಇದ್ದರು.