ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ತತ್ವಾದರ್ಶದಿಂದ ನೆಮ್ಮದಿ ಜೀವನ ಸಾಧ್ಯ: ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ

ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ
Last Updated 7 ಮೇ 2019, 12:37 IST
ಅಕ್ಷರ ಗಾತ್ರ

ಯಾದಗಿರಿ: ’ಕಾಯಕಯೋಗಿ ಬಸವೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ‘ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಬಸವೇಶ್ವರರನ್ನು ಎಷ್ಟು ವರ್ಣಿಸಿದರೂ ಅವರ ಸರಳ ಜೀವನಕ್ಕೆ ಸಾಟಿಯಾಗಲಾರದು. 12ನೇ ಶತಮಾನ ದೇಶ ಅಷ್ಟೇ ಅಲ್ಲದೇ ಜಗತ್ತಿನ ಇತಿಹಾಸದಲ್ಲಿಯೇ ಸುವರ್ಣ ಯುಗವಾಗಿತ್ತು. ಬಸವಾದಿ ಶರಣರ ತತ್ವಗಳಿಂದಾಗಿ ಜಾತಿ, ಮತ, ಪಂಥಗಳನ್ನು ಮೀರಿ ಸಮಾನತೆಯಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬಸವಣ್ಣನವರದ್ದು ಯಾವುದೇ ಒಂದು ವಿಷಯ ಅಥವಾ ಜಾತಿಗೆ ಸೀಮಿತಗೊಳಿಸಿ ಮಾತನಾಡುವಂಥ ವ್ಯಕ್ತಿತ್ವ ಅಲ್ಲ. 12ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನತೆ ಕಲ್ಪಿಸಿದ ಮಹಾನ್ ಮಾನವತಾವಾದಿ. ವಚನಗಳ ಮೂಲಕ ಸಮಾಜ ತಿದ್ದುವ ಕಾಯಕ ಮಾಡಿದ್ದಾರೆ ಎಂದರು.

ಉಪನ್ಯಾಸ ನೀಡಿದ ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ, 12ನೇ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾನ್ ವ್ಯಕ್ತಿ ಜಗಜ್ಯೋತಿ ಬಸವೇಶ್ವರರು. ವಚನಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಶೋಷಣೆಗೊಳಗಾದ ಜನರನ್ನು ಮೇಲೆತ್ತಲು ಶ್ರಮಿಸಿದರು. ಅನುಭವ ಮಂಟಪದಲ್ಲಿ ಎಲ್ಲಾ ಜಾತಿ, ಸಮುದಾಯದ ಶರಣ-ಶರಣೆಯರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಸಮಾಜದಲ್ಲಿನ ಮೌಢ್ಯ ಆಚರಣೆಗಳನ್ನು ವಚನಗಳ ಮೂಲಕ ಖಂಡಿಸಿದರು. ಬಸವಣ್ಣನವರು ಇಡೀ ವಿಶ್ವಕ್ಕೆ ಸುಜ್ಞಾನದ, ಅರಿವಿನ ಬೆಳಕನ್ನು ನೀಡಲೆಂದೇ ಅವತರಿಸಿದ ಮಹಾಜ್ಞಾನಿ. ಅದಕ್ಕಾಗಿ ಇವರನ್ನು ಜಗಜ್ಯೋತಿ ಬಸವೇಶ್ವರ ಎಂಬುದಾಗಿ ಕರೆಯುತ್ತಾರೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಸಮಾಜದ ಮುಖಂಡರಾದ ಮಹಾದೇವಪ್ಪ ಆರ್.ಅಬ್ಬೆತುಮಕೂರು, ಸಿದ್ದಪ್ಪ ಹೊಟ್ಟಿ, ಪ್ರಾಂಶುಪಾಲ ಸುಭಾಶಚಂದ್ರ ಕೌಲಗಿ, ಚನ್ನಪ್ಪ ಠಾಣಗುಂದಿ, ಸಾಹಿತಿ ನೂರಂದಪ್ಪ ಲೇವಡಿ, ಚನ್ನಾರೆಡ್ಡಿ ಬಿಳ್ಹಾರ, ಶಶಿಕಾಂತ ಕಶೆಟ್ಟಿ, ಶರಣಗೌಡ ಬಾಡಿಯಾಳ, ನೀಲಕಂಠ ಶೀಲವಂತ ಪಾಲ್ಗೊಂಡಿದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶುಭಂ ಪದವಿ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT