ಯಾದಗಿರಿ: ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ ಮದುಮಗನಿಗೆ ಕೋವಿಡ್ ದೃಢಪಟ್ಟಿದ್ದು, ಹಸೆಮಣೆ ಏರುವ ಮುನ್ನವೇ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜುಲೈ 13ಕ್ಕೆ ನಿಗದಿಯಾಗಿದ್ದ ಮದುವೆ ಮುಂದೂಡಲಾಗಿದೆ.
ಶಹಾಪುರ ತಾಲ್ಲೂಕಿನ ಗ್ರಾಮವೊಂದರ ಯುವಕ ಮದುವೆಗೆಂದೇ ಜೂನ್ 19ಕ್ಕೆ ಬೆಂಗಳೂರಿನಿಂದ ಮನೆಗೆ ಮರಳಿದ್ದು, ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ತೀವ್ರ ಶೀತ ಕಾಡುತ್ತಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಗಂಟಲು ದ್ರವದ ಪರೀಕ್ಷೆ ನಡೆಸಿದಾಗ, ಕೋವಿಡ್ ತಗುಲಿರುವುದು ದೃಢಪಟ್ಟಿತು.
ಮದುವೆ ಕೆಲಸಕ್ಕಾಗಿ ಯುವಕ ವಿವಿಧೆಡೆ ಓಡಾಡಿದ್ದು, ಮದುವೆ ಮನೆ ಸೇರಿದಂತೆ ಗ್ರಾಮದಲ್ಲಿ ಈಗ ಕೊರೊನಾ ಭೀತಿ ಆವರಿಸಿದೆ.