ಯಾದಗಿರಿ: ‘ಕಳೆದ 25 ದಿನಗಳಿಂದ ಕೋವಿಡ್ನಿಂದ ಬಳಲುತ್ತಿದ್ದ ನಾನು ಈಗ ಸಂಪೂರ್ಣ ಗುಣಮುಖನಾಗಿದ್ದು, ಬುಧವಾರದಿಂದ ಸಾರ್ವಜನಿಕರ ಸೇವೆಗೆ ಬರುತ್ತಿದ್ದೇನೆ’ ಎಂದು ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
‘ಮನೆಯಲ್ಲಿಯೆ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ವೈದ್ಯರ ಸಲಹೆ, ಜನತೆಯ ಆಶೀರ್ವಾದ ಮತ್ತು ಆತ್ಮವಿಶ್ವಾಸದಿಂದ ಬೇಗ ಗುಣಮುಖನಾಗಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.
‘ಕೊರೊನಾ ತಡೆಗೆ ಇರುವ ಔಷಧಿ ಅಂದರೆ ಅದು ಮಾಸ್ಕ್ ಮಾತ್ರ. ಜನರು ನಿರಂತರವಾಗಿ ಮಾಸ್ಕ್ ಬಳಸಬೇಕು. ಎಲ್ಲ ಬಗೆಯ ವೈದ್ಯಕೀಯ ಸಲಹೆಗಳನ್ನು ಪರಿಗಣಿಸಿ. ಅಂತರ ಕಾಪಾಡಿಕೊಂಡು ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಬೇಕು. ಸೋಂಕು ಹರಡುವುದನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.