ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ

ಶಹಾಪುರ: ಕೇಂದ್ರ ಸರ್ಕಾರವು ತೈಲ ಬೆಲೆ ಹೆಚ್ಚಳ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೋವಿಡ್ ಹಾವಳಿಯಿಂದ ಬಡ ಜನತೆ ಆರ್ಥಿಕ ಸಂಕಷ್ಟದಿಂದ ನಲುಗುವಂತೆ ಆಗಿದೆ ಎಂದು ಆರೋಪಿಸಿ ಬುಧವಾರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಬೈಸಿಕಲ್ ಜಾಥಾ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕ ಔಷಧಿ, ಆಮ್ಲಜನಕ, ಇಂಜೆಕ್ಷನ್ ಸಿಗದೆ ನಾಲ್ಕು ಲಕ್ಷಕ್ಕೂ ಅಧಿಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರದ ಲೆಕ್ಕಾಚಾರದಲ್ಲಿ ಮಾತ್ರ ಕೇವಲ 35 ಸಾವಿರ ಜನ ಮೃತಪಟ್ಟಿದ್ದಾರೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಕಂಗಾಲು ಆಗಿದ್ದಾರೆ. ಕೃಷಿಯಿಂದ ನಷ್ಟ ಅನುಭವಿಸಿ ತೊಂದರೆ ಅನುಭವಿಸುವಂತೆ ಆಗಿದೆ ಎಂದು ಕಿಡಿಕಾರಿದರು.
ಅಚ್ಛೇ ದಿನ್ ನೆಪದಲ್ಲಿ ಮೋಡಿ ಮಾಡಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗ ಜನರನ್ನು ಸಂಕಷ್ಟದ ಸುಳಿಗೆ ತಳ್ಳಿದ್ದಾರೆ. ಬೆಲೆ ಏರಿಕೆಗೊಳಿಸಿ ಬಡ ಜನರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ರಾಜ್ಯ ಕೆಪಿಸಿಸಿ ವೀಕ್ಷಕ ಸೂರಜ್ ಹೆಗಡೆ ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಕಾಂಗ್ರೆಸ್ ಪಕ್ಷದ ವಕ್ತಾರ ಮಲ್ಲಪ್ಪ ಉಳಗಂಡಗೇರಿ ಹಾಗೂ ಪಕ್ಷದ ಮುಖಂಡರಾದ ಬಸವರಾಜ ಹೆರುಂಡಿ,ಬಸವರಾಜಪ್ಪಗೌಡ ತಂಗಡಗಿ, ಬಸವರಾಜ ಹೀರೆಮಠ, ಶರಣಪ್ಪ ಸಲಾದಪುರ, ಶಿವಮಾಂತ ಚಂದಾಪುರ, ಗುಂಡಪ್ಪ ತುಂಬಗಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಮುಸ್ತಾಪ ದರ್ಬಾನ್, ವಸಂತ ಸುರುಪುಕರ್, ನೀಲಕಂಠ ಬಡಿಗೇರ, ಶಂಕರ ಸಿಂಘೆ, ಮಹಾದೇವಪ್ಪ ಸಾಲಿಮನಿ, ಶಾಂತಪ್ಪ ಕಟ್ಟಿಮನಿ, ಭೀಮರಾಯ ಜಿನ್ನಾ, ತಿರುಪತಿ ಬಾಣತಿಹಾಳ, ದೇವಿಂದ್ರಪ್ಪ ಕನ್ಯಾಕೊಳೂರ, ಅಲ್ಲಾಪಟೇಲ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.