ಯಾದಗಿರಿ: ‘ನಿವಾರ್’ ಚಂಡಮಾರುತ ಪ್ರಭಾವದಿಂದ ಜಿಲ್ಲೆಯಾದ್ಯಂತ ಶುಕ್ರವಾರ ತುಂತುರು ಮಳೆಯಾಗಿದೆ. ಅಲ್ಲದೆ ದಿನ ಪೂರ್ತಿ ಮೋಡ ಕವಿದ ವಾತಾವರಣ ಇತ್ತು. ಪ್ರಮುಖ ರಸ್ತೆಗಳಲ್ಲಿಯೂ ಜನ ಸಂಚಾರ ಕಡಿಮೆ ಇತ್ತು. ನಗರದಲ್ಲಿ ಗ್ರಾಮೀಣ ಪ್ರದೇಶದಿಂದ ಸಾರ್ವಜನಿಕರು ಹೆಚ್ಚು ಕಂಡು ಬರಲಿಲ್ಲ. ಬಸ್ ನಿಲ್ದಾಣಗಳಲ್ಲಿಯೂ ಜನ ಸಂದಣಿ ಕಡಿಮೆ ಇತ್ತು.
ನಗರದಲ್ಲಿ ಆಗಾಗ ತುಂತುರು ಮಳೆ ಬೀಳುತ್ತಿತ್ತು. ಇದರಿಂದ ವಾತಾವರಣದಲ್ಲಿ ತಂಪಿನ ಅನುಭವವಾಗುತ್ತಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಉಳಿದೆಡೆಯೂ ಮಳೆಯಾಗಿದೆ. ಸಂಜೆ ವೇಳೆಗೆ ಚಳಿ ಹೆಚ್ಚಾಗಿ ನಗರ ನಿವಾಸಿಗಳುಮನೆ ಸೇರಿಕೊಂಡಿದ್ದರು. ಹುಣಸಗಿ ಪಟ್ಟಣ ಸುತ್ತಮುತ್ತ ಶುಕ್ರವಾರ ಬೆಳಿಗ್ಗೆ ಮಂಜುಕವಿದ ವಾತಾವರಣ ಇತ್ತು. ಆಗಸದಲ್ಲಿ ಮಂಜು ಆವರಿಸಿತ್ತು. ಗುರುಮಠಕಲ್ ತಾಲ್ಲೂಕಿನಲ್ಲಿ ತಂಪು ವಾತಾವರಣ ಜೊತೆಗೆ ತುಂತುರು ಮಳೆಯಾಗಿದೆ.
ಯಾದಗಿರಿ ನಗರ ಪ್ರದೇಶವಲ್ಲದೆ ಶಹಾಪುರ, ಸುರಪುರ, ವಡಗೇರಾ, ಸೈದಾಪುರ, ಯರಗೋಳ, ಕೆಂಭಾವಿ, ಕಕ್ಕೇರಾದಲ್ಲಿ ಮೋಡಕವಿದ ವಾತಾವರಣ ಇತ್ತು. ಕೆಲವೊತ್ತು ತುಂತುರು ಮಳೆಯಾಗಿದೆ.
ತುಂತುರು ಮಳೆಯಿಂದ ಭತ್ತದ ರಾಶಿಗೆ, ಹತ್ತಿ ಬೆಳೆಗೆ ಸಮಸ್ಯೆಯಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.