ಯಾದಗಿರಿ: ಜಿಲ್ಲೆಯ ಸುರಪುರ ನಗರದಲ್ಲಿ ಮಹಿಳೆಯರಿಗೆ ಬೇವಿನ ಸೊಪ್ಪು ಕಟ್ಟಿ ಹರಕೆಯ ನೆಪದಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಡೆದಿದೆ ಎನ್ನಲಾಗಿದೆ.
ನಗರ ಹೊರ ವಲಯದಲ್ಲಿ ಗುರುವಾರ ಈ ಅನಿಷ್ಠ ಪದ್ಧತಿ ಜರುಗಿದ್ದು,ದೇವರಿಗೆ ಹರಿಕೆ ಹೊತ್ತವರು ಈ ರೀತಿಯಾಗಿ ಹರಕೆ ತೀರಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ಇದು ಹಳ್ಳಿಯಲ್ಲಿ ಮಾತ್ರ ನಡೆಯುತ್ತಿತ್ತು. ಈಗ ನಗರದಲ್ಲಿಯೂ ನಡೆದಿದೆ.
ಈ ಕುರಿತು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಪ್ರತಿಕ್ರಿಯಿಸಿ, ‘ಅನಿಷ್ಠ ಪದ್ಧತಿ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ. ಸುರಪುರ ತಹಶೀಲ್ದಾರ್ ಅವರಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಂಥ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.