ಸುರಪುರ: ಹಸನಾಪುರ ಪೆಟ್ರೋಲ್ ಬಂಕ್ ಹತ್ತಿರ ವೀರಪ್ಪ ನಿಷ್ಠಿ ತೋಟದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಿಂಬೆ ಹಾಗೂ ನೇರಳೆ ಮರಗಳು ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬೆಂಕಿ ಅನಾಹುತದಿಂದ ಅಂದಾಜು 300 ನಿಂಬೆ, 40 ನೇರಳೆ ಗಿಡಗಳು, ಲಾವಂಚಿ ಬೇರು ಸೇರಿದಂತೆ ವಿವಿಧ ಜಾತಿಯ ಔಷಧೀಯ ಸಸ್ಯಗಳು ಸುಟ್ಟು ಕರಕಲಾಗಿವೆ. ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿ ಪೈಪ್ ನಾಶವಾಗಿದೆ. ಕಟಾವಿನ ಹಂತದಲ್ಲಿದ್ದ ಔಷಧೀಯ ಸಸ್ಯಗಳು ನಾಶವಾಗಿವೆ.
8 ಎಕರೆ ತೋಟದಲ್ಲಿ 4 ಎಕರೆ ತೋಟ ಬೆಂಕಿಗೆ ಅಹುತಿಯಾಗಿದೆ. ಸುಮಾರು ₹12 ಲಕ್ಷ ರೂ. ಹಾನಿಯಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತೋಟದ ಮಾಲೀಕರಾದ ಶರಣಬಸಪ್ಪ ವಿ.ನಿಷ್ಠಿ ತಿಳಿಸಿದ್ದಾರೆ.