ಯಾದಗಿರಿ: ನಗರದಲ್ಲಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ– 1098 ಅಧಿಕಾರಿ ಗಳು ಕಾರ್ಯಾಚರಣೆ ಕೈಗೊಂಡು ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ವರು ಮಕ್ಕಳನ್ನು ರಕ್ಷಿಸಿದ್ದಾರೆ.
ನಗರದಲ್ಲಿರುವ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್, ರೆಸ್ಟೋರಂಟ್ನಲ್ಲಿ ತಪಾಸಣೆ ನಡೆಸಿದ ವೇಳೆ ಪತ್ತೆಯಾಗಿದ್ದಾರೆ. ಸುಮಾರು 43 ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ತಪಾಸಣೆಗಾಗಿ ಹಠಾತ್ ದಾಳಿ ಕೈಗೊಳ್ಳಲಾಯಿತು.
ಗ್ಯಾರೇಜ್ ಮತ್ತು ಹೋಟೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಒಪ್ಪಿಸಲಾಯಿತು. ದಾಳಿ ಸಂದರ್ಭದಲ್ಲಿ ವಾಣಿಜ್ಯ ಮಳಿಗೆಗಳ ಮಾಲಿಕರಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿತಕ್ಕೆ ಒಳಪಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿವಳಿಕೆ ಮೂಡಿಸಲಾಯಿತು ಎಂದು ಯಾದಗಿರಿ ಉಪ ವಿಭಾಗ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಗುರುಮಠಕಲ್: ಪಟ್ಟಣದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಕುರಿತು ಹಠಾತ್ ದಾಳಿ ಕೈಗೊಳ್ಳಲಾಯಿತು.
ಶುಕ್ರವಾರ ಪಟ್ಟಣದ ಸುಮಾರು 48 ವಾಣಿಜ್ಯ ಸಂಸ್ಥೆಗಳಲ್ಲಿ ತಪಾಸಣೆ ಮಾಡಲಾಗಿದೆ. ಯಾವುದೇ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರು ಕಂಡು ಬಂದಿಲ್ಲ. ಈ ದಾಳಿಯಲ್ಲಿ ಒಂದು ಕಡೆ ಕಡಿಮೆ ವೇತನ ನೀಡುತ್ತಿರುವುದು ಕಂಡುಬಂದಿರುವುದರಿಂದ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿಸಿಕೊಳ್ಳಲಾಗಿದೆ.