ಯರಗೋಳ: ಗ್ರಾಮದ ಗುಡ್ಡದ ಮಲ್ಲಯ್ಯನ ಜಾತ್ರೆ ಮರೆಪ್ಪ ಪೂಜಾರಿ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ರಾತ್ರಿ 8ಕ್ಕೆ ಮಾನೆಗಾರ ಓಣಿಯಲ್ಲಿರುವ ಮಲ್ಲಯ್ಯನ ದೇವಸ್ಥಾನದಿಂದ ಹೊರಟ ಅಲಂಕೃತದ ಪಲ್ಲಕ್ಕಿ ಮೆರವಣಿಗೆ ಗುಡ್ಡದ ಮಲ್ಲಯ್ಯನ ದೇವಸ್ಥಾನ ತಲುಪಿತು. ನಂತರ ಗುಡ್ಡದ ಮೇಲಿರುವ ಜ್ಯೋತಿಗೆ ತುಪ್ಪದ ಸೇವೆ ಜರುಗಿತು.
ಬುಧವಾರ ಬೆಳಗ್ಗೆ 9 ಗಂಟೆಗೆ ಸಾವಿರಾರು ಸಂಖ್ಯೆಯ ಭಕ್ತರು ಜೈಕಾರ ಕೂಗುತ್ತಾ, ಭಂಡಾರ ಚೆಲ್ಲುತ್ತಾ ಸರಪಳಿ ಹರಿದರು.
ಗುಡ್ಡದ ಎತ್ತರದ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಕುಳಿತು ಜಾತ್ರೆಯಲ್ಲಿನ ಸಂಭ್ರಮದ ಕ್ಷಣಗಳನ್ನು ವೀಕ್ಷಿಸಿದರು. ಸಿಹಿ ಪಳಾರ, ಮಕ್ಕಳ ಆಟಕ್ಕೆ ಸಾಮಗ್ರಿಗಳು, ಬಳೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.
ಭಕ್ತರಿಗೆ ಗೋಧಿ ಹುಗ್ಗಿ, ಅನ್ನ, ಸಾಂಬಾರ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.