ಸುರಪುರ: ಅನನ್ಯ ತತ್ವ ಪದಕಾರ, ನಾಡಿನಾದ್ಯಂತ ನೂರಾರು ದೇಗುಲಗಳನ್ನು ಹೊಂದಿರುವ ಪರಮಾನಂದ ಪ್ರಭುಗಳ ಮೂಲ ದೇವಸ್ಥಾನವಿರುವ ಹೆಬ್ಬಾಳ ಕೆ.ಗ್ರಾಮದಲ್ಲಿ ಭಾನುವಾರ ಜಾತ್ರೆ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ, ನೈವೇದ್ಯ, ದರ್ಶನ, ದಾಸೋಹ ನಡೆಯಿತು. ಮಧ್ಯಾಹ್ನ ಜಾವಳ ಕಾರ್ಯಗಳು ನಡೆದವು. ಸಂಜೆ ಪರಮಾನಂದ ಪ್ರಭುಗಳ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು.
ನಂತರ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಪರಮಾನಂದ ಪ್ರಭುಗಳಿಗೆ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತರು ರಥದ ಮೇಲೆ ಖರ್ಜೂರ, ಉತ್ತತ್ತಿ ಎಸೆದರು.
ತಮಿಳುನಾಡು, ಆಂಧ್ರಪ್ರದೇಶ, ಚಾಮರಾಜನಗರ, ಮಡಿಕೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದರು.
ಸೋಮವಾರದಿಂದ ಶುಕ್ರವಾರದವರೆಗೆ ದನಗಳ ಜಾತ್ರೆ ನಡೆಯಲಿದೆ. ಈ ಜಾತ್ರೆ ಪ್ರಸಿದ್ಧವಾಗಿದ್ದು, ವಿವಿಧೆಡೆಯಿಂದ ದನಗಳನ್ನು ಮಾರಾಟಕ್ಕೆ ತರಲಾಗುತ್ತದೆ. ಫೆ.18 ರಂದು ಕಳಸ ಅವರೋಹಣದೊಂದಿಗೆ ಜಾತ್ರೆ ಸಂಪನ್ನವಾಗುತ್ತದೆ.