ಯಾದಗಿರಿ:ತಾಲ್ಲೂಕಿನ ವರ್ಕನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ (ಎಂ) ಗ್ರಾಮದಲ್ಲಿ ಚರಂಡಿ ಇದ್ದರೂ ನೀರು ಮುಂದೆ ಹೋಗದೇ ರಸ್ತೆ ತುಂಬ ನಿಲ್ಲುತ್ತವೆ. ಇದರಿಂದ ನೀರು ಹರಿಯಲು ಸ್ಥಳವೇ ಇಲ್ಲದಾಗಿದ್ದು, ಚರಂಡಿ ನೀರೆಲ್ಲ ರಸ್ತೆ ಮೇಲೆ ಸಂಗ್ರಹ ಆಗುತ್ತವೆ. ಇದರಿಂದಗ್ರಾಮಸ್ಥರು ನಡೆದಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮನೆಗಳ ಮುಂದೆಚರಂಡಿ ನೀರು ನಿಂತಿರುವುದರಿಂದ ಗಬ್ಬುನಾತ ಬರುತ್ತಿದೆ. ಅಲ್ಲದೆ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.ಅಲ್ಲದೆ ಸೊಳ್ಳೆ, ಹಾವು ಮತ್ತು ಚೇಳಿನ ಕಾಟವಿದೆಎನ್ನುತ್ತಾರೆ ಗ್ರಾಮಸ್ಥರು.
ಇಕ್ಕಟ್ಟಾದ ರಸ್ತೆಯಲ್ಲಿಯೇ ಗ್ರಾಮಸ್ಥರು ನಿತ್ಯ ಸಂಚರಿಸುವ ಸ್ಥಿತಿ ಇದೆ. ಉತ್ತಮ ಸಿಸಿ ರಸ್ತೆ ಇಲ್ಲ. ಕಾಲು ದಾರಿಯಂತೆ ಇರುವ ರಸ್ತೆಯಲ್ಲಿಯೇ ಜನರು ಸಂಚರಿಸುತ್ತಾರೆ.
ಇಪ್ಪತ್ತು ರೂಪಾಯಿ ಚಂದಾ:
ಗ್ರಾಮದಲ್ಲಿನ ಈ ಕೊಳಚೆ ನೀರು ಹೊರಗಡೆ ಸಾಗಿಸಲು ಬಡಾವಣೆಯ ನಿವಾಸಿಗಳು ಮನೆ ಮನೆ ತಿರುಗಿ ₹ 20 ಚಂದಾ ವಸೂಲಿ ಮಾಡುತ್ತಿದ್ದಾರೆ. ಗ್ರಾಮದ ಭೀಮನಗೌಡ ಪೊಲೀಸ್ ಪಾಟೀಲ ಎಂಬುವರು ಈ ಚರಂಡಿ ನೀರನ್ನು ಬೇರೆಕಡೆ ಸಾಗಿಸಲು ಮೋಟಾರ್ ಅಳವಡಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಮೋಟಾರ್ಗೆ ಪೆಟ್ರೊಲ್ ತರಲು ಮನೆ ಮನೆಗೆ ಚಂದಾ ಎತ್ತುತ್ತಿದ್ದಾರೆ.
ನಡೆದಾಡಲು ಕಲ್ಲು ಸೇತುವೆ:
ಚರಂಡಿ ನೀರು ಹರಿಯುವ ಗ್ರಾಮದ ಮನೆಗಳ ಎದುರು ಜನರು ತಿರುಗಾಡಲು ಚರಂಡಿ ನೀರಲ್ಲಿ ಕಲ್ಲುಗಳನ್ನು ಸೇತುವೆಯಾಗಿ ಹಾಕಿಕೊಂಡಿದ್ದಾರೆ. ಸುಮಾರು 10 ಮನೆಗಳ ಕುಟುಂಬಸ್ಥರು ಈ ಕಲ್ಲುಗಳ ಆಸರೆಯಿಂದಲೇ ಗ್ರಾಮದಲ್ಲಿ ಪ್ರವೇಶ ಮಾಡಬೇಕಾದ ಪರಿಸ್ಥಿತಿ ಇದೆ.