ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ನೆನಪು: ‘ವಂದೇ ಮಾತರಂ ಚಳವಳಿ’ ಸ್ಫೂರ್ತಿ

ನಿಜಾಮ ಸರ್ಕಾರ ನಿಷೇಧಿಸಿದ್ದರಿಂದ ತಿರುಗಿ ಬಿದ್ದ ಯುವ ಸಮೂಹ, ಹೋರಾಟಕ್ಕೆ ಅಣಿ ಮಾಡಿಸಿದ ಹಾಡು
Last Updated 14 ಸೆಪ್ಟೆಂಬರ್ 2022, 3:13 IST
ಅಕ್ಷರ ಗಾತ್ರ

ಯಾದಗಿರಿ: ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಕರ್ನಾಟಕ ಸಂಸ್ಥಾನವನ್ನು ಬ್ರಿಟಿಷರೊಂದಿಗೆ ಒಳ ಒಪ್ಪಂದದಿಂದ ನಿಜಾಮರೇ ಆಳ್ವಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನದ ವಿರುದ್ಧ ಹೋರಾಟಕ್ಕೆ ‘ವಂದೇ ಮಾತರಂ‘ ಪ್ರಮುಖ ಸ್ಥಾನ ವಹಿಸಿ ಸ್ಫೂರ್ತಿ ನೀಡಿತ್ತು.

1936ರಲ್ಲಿ ನಿಜಾಮ ಸರ್ಕಾರ ಶಿಕ್ಷಣ ಸಂಸ್ಥೆ, ವಸತಿಗೃಹ, ಸಾರ್ವಜನಿಕ ಸ್ಥಳಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ನಿಷೇಧಿಸಿತು. ಶಿಕ್ಷಣ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಂದೇ ಮಾತರಂ ನಿಷೇಧ ಆದೇಶ ಹೊರಬಿತ್ತೊ ಆಗ ಯುವಶಕ್ತಿ ನಿಜಾಮನ ವಿರುದ್ಧ ಹೋರಾಟ ರೂಪಿಸತೊಡಗಿತು.

ನಿಜಾಮ ಸಂಸ್ಥಾನದ ಹೈದರಾಬಾದ್‌ನ ಉಸ್ಮಾನಿಯ ವಿಶ್ವವಿದ್ಯಾಲಯ ವಸತಿ ಗೃಹದಲ್ಲಿಯೂ ವಂದೇ ಮಾತರಂ ಹಾಡುವುದನ್ನು ನಿಷೇಧಿಸಿತು. ಇದು ವಿಶ್ವವಿದ್ಯಾಲಯ ವಿರುದ್ಧ ಚಳವಳಿಗೆ ನಾಂದಿಯಾಯಿತು. ಎರಡು ವರ್ಷಗಳ ಮುಷ್ಕರದ ನಂತರ ವಿದ್ಯಾರ್ಥಿಗಳ ಚಳವಳಿಗೆ ಮಣಿದು ನಿಜಾಮ ಸರ್ಕಾರ ವಂದೇ ಮಾತರಂ ನಿಷೇಧವನ್ನು ಹಿಂದಕ್ಕೆ ಪಡೆಯಿತು. ಇದು ಹೈದರಾಬಾದ್ ಕರ್ನಾಟಕ ಸಂಸ್ಥಾನದ ವಿರುದ್ಧ ಹೋರಾಟದ ಹಾದಿಯಲ್ಲಿ ಮೊದಲನೇ ಜಯ ಸಿಕ್ಕಿತು. ಇದರಿಂದ ಚಳವಳಿಗಾರರಲ್ಲಿ ಆತ್ಮವಿಶ್ವಾಸ ಮೂಡಿತು. ಇದೇ ರೀತಿ ಮುಂದೆಯೂ ನಿಜಾಮ ಸರ್ಕಾರದ ವಿರುದ್ಧ ಆಡಳಿತ ವ್ಯವಸ್ಥೆ ವಿರುದ್ಧ ಯುವಕರು ಬಂಡೆದ್ದರು. ಇದೇ ವೇಳೆ ಅನೇಕರು ನಿಜಾಮ ಸರ್ಕಾರವನ್ನು ಹಿಮ್ಮೆಟ್ಟಿಸಲು ಚಳವಳಿಗಳನ್ನು ರೂಪಿಸಿದರು.

ಸಾಹಿತ್ಯದಿಂದಲೂ ಹೋರಾಟ:
ರಾಜಕಾರರ ವಿರುದ್ಧ ಹಲವರು ಸಾಹಿತ್ಯವನ್ನು ರಚನೆ ಮಾಡಿ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ರಜಾಕಾರರನ್ನು ಕುರಿತ ಬರೆದ ಲಾವಣಿಗಳು, ಬುಲಾಹಿ ಹಾಡಿಗಳು ರಜಾಕಾರರ ದೌರ್ಜನ್ಯವನ್ನು ಬಿಂಬಿಸಿವೆ. ಈ ಹಾಡುಗಳು ರಜಾಕಾರರ ದಬ್ಬಾಳಿಕೆ ಬಿಂಬಿಸುವ ಹಾಡುಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಜಗನ್ನಾಥರವ ಚಂಡ್ರಕಿ:
ಜಗನ್ನಾಥರಾವ ಚಂಡ್ರಕಿ ಅವರು ಆಗಿನ ಯಾದಗಿರಿ ತಾಲ್ಲೂಕಿನ ಚಂಡ್ರಕಿ ಗ್ರಾಮದವರು. ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ವಂದೇ ಮಾತರಂ ಚಳವಳಿಯಲ್ಲಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಸ್ವದೇಶ ಅಭಿಮಾನ ಬೆಳೆಸಿಕೊಂಡು ಹೋರಾಟಗಳನ್ನು ರೂಪಿಸಿಕೊಂಡು ಬಂದಿದ್ದರು.

ವಿದ್ಯಾಧರ ಗುರೂಜಿ:
ವಿದ್ಯಾಧರ ಗುರೂಜಿ ಅವರು ಬಾಲ್ಯದಿಂದಲೇ ಸಂಘಟನಾ ಸಾಮರ್ಥ್ಯವನ್ನು ಹೊಂದಿದ್ದರು. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಆಟ ಪಾಠಗಳ ಜೊತೆಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಬಲರಾಗಲು ಚಿಂತಿಸುತ್ತಿದ್ದರು. ಗುರೂಜಿಯವರು ವಂದೇ ಮಾತರಂ ಚಳವಳಿಗೆ ತಮ್ಮ ಆ ಚಿಕ್ಕ ವಯಸ್ಸಿನಲ್ಲಿ ಮುಂದಾಗಿ ಹೋರಾಟ ರೂಪಿಸಿದ್ದರು.

ಪ್ರತ್ಯೇಕ ರಾಷ್ಟ್ರದ ಆಸೆ ಹೊಂದಿದ್ದ ನಿಜಾಮ:
1947 ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ದೇಶದ್ಯಾಂತ ಸಂಭ್ರಮದಿಂದ ಆಚರಿಸುತ್ತಿದ್ದರೆ, ಹೈದರಾಬಾದ್ ಪ್ರಾಂತ್ಯದ ಜನರಿಗೆ ಅವಕಾಶ ಇರಲಿಲ್ಲ. ನಿಜಾಮ ಮಿರ್‌ ಉಸ್ಮಾನ್‌ ಆಲಿ ಭಾರತದ ಒಕ್ಕೂಟವನ್ನು ಸೇರುವುದೆಲ್ಲವೆಂದು ಪಟ್ಟು ಹಿಡಿದಿದ್ದ. ಹೈದರಾಬಾದ್ ಪ್ರದೇಶ ಸ್ವತಂತ್ರ ದೇಶವೆಂದು ಘೋಷಣೆ ಮಾಡಿಕೊಂಡು ಬಿಟ್ಟಿದ್ದ. ಪಾಕಿಸ್ತಾನ ವಿಭಜನೆಯಾದಂತೆ ಹೈದರಾಬಾದ್ ಪ್ರಾಂತ್ಯವು ಪ್ರತ್ಯೇಕ ರಾಷ್ಟ್ರವಾಗಿ ಇರಬೇಕೆಂದು ನಿಜಾಮನ ಆಸೆಯಾಗಿತ್ತು. ಇದರಿಂದ ರಜಾಕಾರರು ಈ ಭಾಗದ ಜನರಲ್ಲಿ ಭಯ ಭೀತಿಯನ್ನು ಹುಟ್ಟಿಸಿದರು. ಲೂಟಿ, ಸುಲಿಗೆಯಿಂದ ಸಂಸ್ಥಾನದ ಜನರು ಮೆಚ್ಚಿ ಬಿದ್ದಿದ್ದರು. ಮನೆಮಠ ಕಳೆದುಕೊಂಡರು. ದೇಶದ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಯಾರು ಹಾರಿಸಬಾರದೆಂದು ನಿಜಾಮನು ಆದೇಶ ಹೊರಡಿಸಿದ್ದನು. ಆದರೂ ಲೆಕ್ಕಿಸದೆ ಹಲವರು ತ್ರಿವರ್ಣ ಧ್ವಜವನ್ನು ಮೆರವಣಿಗೆ ಧ್ವಜಕಟ್ಟೆಗಳಲ್ಲಿ ಹಾರಿಸಿ, ದೇಶ ಅಭಿಮಾನ ಮೆರೆದರು. ನಿಜಾಮ ಕಪಿಮುಷ್ಠಿಯಿಂದ ಸ್ವಾತಂತ್ರ್ಯ ನಂತರವೂ ಈ ಭಾಗ 13 ತಿಂಗಳು, ಎರಡು ದಿನದ ನಂತರ ವಿಮೋಚನೆ ಆಯಿತು.

ಹೋರಾಟದಲ್ಲಿ ಮಹಿಳೆಯರ ಪಾತ್ರ

ವಿಮೋಚನಾ ಹೋರಾಟಕ್ಕೆ ಮಹಿಳೆಯರ ಪಾತ್ರವೂ ದೊಡ್ಡದಾಗಿದೆ. ಪುರುಷರು ಶಿಬಿರಗಳಲ್ಲಿ ವರ್ಷಾನುಗಟ್ಟಲೆ ಇದ್ದರೆ, ಮಹಿಳೆಯರು ಮನೆಗಳನ್ನು ನೋಡಿಕೊಂಡು ಸಂಸಾರವನ್ನು ಸಾಗಿಸಿಕೊಂಡು ಹೋಗುತ್ತಿದ್ದರು.

ನಿಜಾಮ ಸರ್ಕಾರದ ರಜಾಕಾರರ ಹಾವಳಿ ಕುರಿತಂತೆ ಶಿಬಿರದಲ್ಲಿ ಇದ್ದವರಿಗೆ ಗುಪ್ತಚರ ಇಲಾಖೆಯಂತೆ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರು. ಬಳೆಗಾರರ ಮುಖಾಂತರ ಸುದ್ದಿ ಕಳಿಸುತ್ತಿದ್ದರು. ರೊಟ್ಟಿ ಬುತ್ತಿ ಗಂಟಿನಲ್ಲಿ ಕ್ಯಾಂಪಿನಲ್ಲಿ ಇದ್ದಂಥವರಿಗೆ ಬೇಕಾದಂತ ಸಣ್ಣಪುಟ್ಟ ಸಾಮಗ್ರಿ, ಔಷಧಿಗಳನ್ನು ಹಾಕಿ ಕೊಡುತ್ತಿದ್ದರು. ಹಳ್ಳ, ಕೊಳ್ಳ, ನದಿಗಳಲ್ಲಿ ಬಟ್ಟೆ ಒಗೆಯಲು ಹೋದ ಹೆಣ್ಣುಮಕ್ಕಳು ಅಲ್ಲಿ ಇತರ ಮಹಿಳೆಯರ ಜತೆ ಚರ್ಚೆ ಮಾಡಿ ಹೋರಾಟದ ರೂಪುರೇಷಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಇವರು ತಮ್ಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿದ್ದರು.

ಕ್ಯಾಂಪುಗಳಲ್ಲಿ ಕೆಲವು ಮಹಿಳೆಯರು ಅಡುಗೆ ಮತ್ತು ಇತರ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಆದರೆ, ಅವರ ಸಂಖ್ಯೆ ಬಹಳ ವಿರಳವಾಗಿತ್ತು. ಶಿಬಿರದಲ್ಲಿದ್ದವರನ್ನು ಹೆಸರು ಇಟ್ಟು ಕರೆಯುತ್ತಿರಲಿಲ್ಲ. ಆಯಾ ಊರಿನ ಹೆಸರೇಳಿ ಅವ್ವ, ಬಾಯಿ ಎಂದು ಕರೆಯುತ್ತಿದ್ದರು. ಇದರಿಂದ ಅವರ ಹೆಸರುಗಳು ಹೆಚ್ಚು ಪ್ರಚಾರವಾಗಿದೆ, ಗೊತ್ತಿಲ್ಲದ ಕಾರಣ ಇತಿಹಾಸದ ಪುಟ ಸೇರದೆ ಮರೆಯಾಗಿ ಹೋಗಿವೆ.

ಯಾದಗಿರಿ ಜಿಲ್ಲೆಯಲ್ಲಿ ಕೋಲೂರು ಮಲ್ಲಪ್ಪ, ವಿರುಪಾಕ್ಷಪ್ಪಗೌಡರು ತಮ್ಮ ಇಡೀ ಜೀವನವನ್ನೇ ದೇಶಕ್ಕಾಗಿ ಆರ್ಪಿಸಿಕೊಂಡಿದ್ದಾರೆ. ಬ್ರಿಟಿಷ್‌, ನಿಜಾಮರ ವಿರುದ್ಧಹೋರಾಟಗಳಲ್ಲಿ ಪಾಲ್ಗೊಂಡು ಸ್ಫೂರ್ತಿ ತುಂಬಿದ್ದಾರೆ. ಇಂಥವರ ತ್ಯಾಗಗಳಿಂದಲೇ ವಿಮೋಚನೆಗೆ ನಾಂದಿಯಾಗಿದೆ

ಭಾಸ್ಕರರಾವ ಮುಡಬೂಳ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT