ಯಾದಗಿರಿ: ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿದ್ದ ಒಂದು ವರ್ಷದ ಬಸ್ಸಮ್ಮ ಶಿವಾನಿ ಕೆ. (ಹೆಸರು ಬದಲಿಸಿದೆ) ಮಗುವನ್ನು ದತ್ತು ಪಡೆದ ಕೇರಳ ಮೂಲದ ಶಿಕ್ಷಕನಿಗೆ ಮಂಗಳವಾರ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಮಗುವನ್ನು ಹಸ್ತಾಂತರಿಸಿದರು.
ಕೇರಳ ಮೂಲದ ಶಿಕ್ಷಕ ಶಾಜಿಲ್ ಕುಮಾರ, ಶೈನಿ ಅವರು ಸಿ.ಎ.ಆರ್.ಎ. ವೆಬ್ಸೈಟ್ನಲ್ಲಿ ದತ್ತು ಪಡೆಯಲು ನೋಂದಾಯಿಸಿಕೊಂಡಿದ್ದರು. ಯಾದಗಿರಿ ಜಿಲ್ಲೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿದ್ದ ಒಂದು ವರ್ಷದ ಹೆಣ್ಣು ಮಗು ಹೊಂದಾಣಿಕೆಯಾಗಿದೆ. ಅದರಂತೆ ಕಾನೂನುಬದ್ಧವಾಗಿ ಮಂಗಳವಾರ ದಂಪತಿಗೆ ಮಗುವನ್ನು ದತ್ತು ನೀಡಿ, ಹಸ್ತಾಂತರಿಸಲಾಯಿತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಕೆ., ಸಿಡಿಪಿಒ ಲಾಲ್ ಸಾಬ್, ಮಕ್ಕಳ ರಕ್ಷಣಾಧಿಕಾರಿ ದಶರಥ ನಾಯಕ, ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ನಾಗಮ್ಮ ಹಿರೇಮಠ, ಸಂಯೋಜಕಿ ಭಾಗ್ಯಶ್ರೀ, ಕಾನೂನು ಮತ್ತು ಪರೀವಿಕ್ಷಣಾಧಿಕಾರಿ ರಾಜೇಂದ್ರ ಕುಮಾರ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.
Quote - ನಮ್ಮ ಜಿಲ್ಲೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಿಂದ ಇದೇ ಮೊದಲ ಬಾರಿಗೆ ಕೇರಳ ಮೂಲದ ದಂಪತಿಗೆ ಮಗುವನ್ನು ದತ್ತು ನೀಡಲಾಗಿದೆ. ದತ್ತು ಪಡೆದ ಒಂದು ವರ್ಷದ ಹೆಣ್ಣು ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಸ್ನೇಹಲ್ ಆರ್. ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.