ಚಂಡರಕಿ (ಯಾದಗಿರಿ ಜಿಲ್ಲೆ): ಕಲಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಆಫ್ಜಲಪುರ ತಾಲ್ಲೂಕಿನ ಹೆರೂರ (ಬಿ) ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಗ್ರಾಮ ವಾಸ್ತವ್ಯರದ್ದಾಗಿಲ್ಲ,ಮುಂದೂಡಲಾಗಿದೆ. ಜುಲೈ ಎರಡನೇ ವಾರದಲ್ಲಿ ಅಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಚಂಡರಕಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವ್ಯ ಮುಂದೂಡಲಾಗಿದೆ ಎನ್ನುವುದಕ್ಕಿಂತ ಈ ಭಾಗದಲ್ಲಿ ಆಶಾದಾಯಕ ಮಳೆ ಬಂದಿದೆ. ಹೀಗಾಗಿ ವಾಸ್ತವ್ಯ ಮುಂದೂಡಲಾಗಿದೆ. ಹೀಗಾಗಿ ಆ ಭಾಗದ ಜನರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಕ್ಷಮೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.
ಕಲಬುರ್ಗಿ ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಜನತಾದರ್ಶನಕ್ಕೆ ಹಾಕಿದ್ದ ಪೆಂಡಾಲ್ ಮಳೆಗೆ ಹಾಳಾಗಿರುವುದು.
ಜುಲೈನಲ್ಲಿ 10 ದಿನಗಳ ವಿಧಾನಸಭೆ ಅಧಿವೇಶನ ನಡೆಸಬೇಕಾಗಿದೆ. ಅದರಿಂದ ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.
ಚಂಡರಕಿ ಗ್ರಾಮ ವಾಸ್ತವ್ಯದಲ್ಲಿ ಜನ ಸಾಮಾನ್ಯರ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಕೆಲ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಮಾತ್ರ ಬಗೆಹರಿಸಬಹುದಾಗಿದೆ. ಹೀಗಾಗಿ ಆ ಪ್ರಕರಣಗಳನ್ನು ಇತ್ಯರ್ಥಪಡಿಸಿಲ್ಲ ಎಂದರು.