ಯರಗೋಳ: ಚಾಮನಳ್ಳಿ, ಬಾಚವಾರ, ಗುಲಗುಂದಿ ಸೇರಿ ಇನ್ನಿತರ ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಶಿಕ್ಷಕರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 525 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಕೊಠಡಿಗಳ ಕೊರತೆ ಇದೆ. ಭೂ ಸೇನಾ ನಿಗಮದಿಂದ 5 ಕೋಣೆ, ಲೋಕೋಪಯೋಗಿ ಇಲಾಖೆಯಿಂದ 1 ಕೋಣೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. 2 ತಿಂಗಳಾದರೂ ಕಾಮಗಾರಿ ಪ್ರಾರಂಭವಾಗಿಲ್ಲ.
‘ಶಾಸಕರ ₹2 ಲಕ್ಷ ಅನುದಾನದಲ್ಲಿ ಕೋಣೆಗಳ ದುರಸ್ತಿ ಕೆಲಸ ಆಗಬೇಕು. ಕಾಮಗಾರಿಗಳು ಶೀಘ್ರವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಮುಖ್ಯ ಶಿಕ್ಷಕ ಆಶಪ್ಪ ಮುಂಡರಗಿ ತಿಳಿಸಿದರು.
‘ಚಾಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 209 ವಿದ್ಯಾರ್ಥಿಗಳಿದ್ದು, ಶಾಲೆಯ ಅಂಗಳದಲ್ಲಿರುವ ಕೊಳವೆಬಾವಿಕೆಟ್ಟು ಹೋಗಿದೆ. ದುರಸ್ತಿ ಮಾಡಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ವಿಳಂಬ ಮಾಡುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.
‘ಬಾಚವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 190 ವಿದ್ಯಾರ್ಥಿಗಳಿದ್ದು, ಪ್ರತಿ ವರ್ಷ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಆಟವಾಡಲು ಆಟದ ಮೈದಾನವಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮಸ್ಥರು ನೆರವು ನೀಡಿ ಒಂದು ಒಳ್ಳೆಯ ಜಾಗವನ್ನು ಖರೀದಿಸಿದರೆ ವಿದ್ಯಾರ್ಥಿಗಳ ಆಟ ಮತ್ತು ಪಾಠಕ್ಕೆ ಒಳ್ಳೆಯದಾಗುತ್ತೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.
‘ಗುಲಗುಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 45 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಉದ್ಘಾಟನೆಗೆ ಮೊದಲೇಕೋಣೆಯ ಮುಂದಿನ ಕಲ್ಲು ಬಂಡೆಗಳು ಕಿತ್ತು ಹೋಗಿವೆ’ ಎಂದು ಗ್ರಾಮದ ಮುಖಂಡ ಈಶಪ್ಪ ತಿಳಿಸಿದರು.
ಥಾನುನಾಯಕ ತಾಂಡಾದಲ್ಲಿ 45 ವಿದ್ಯಾರ್ಥಿಗಳಿದ್ದು, ನಲಿ-ಕಲಿ ಕೋಣೆ, ಕುಡಿಯುವ ನೀರಿನ ಸಮಸ್ಯೆ ಇದೆ. ಥಾವರು ನಾಯಕ ತಾಂಡಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವಿದ್ಯಾರ್ಥಿಗಳಿದ್ದು, ಇಬ್ಬರುಕಾಯಂಶಿಕ್ಷಕರಿದ್ದಾರೆ. ಶಾಲೆಯ ಬಾಗಿಲುಗಳು ಯಾವಾಗಲೂ ಮುಚ್ಚಿರುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ವೆಂಕಟೇಶ ನಗರ, ಅಲ್ಲಿಪುರ, ವಡ್ನಳ್ಳಿ, ಕಂಚಗಾರಳ್ಳಿ ಗ್ರಾಮದಿಂದ ಪ್ರತಿನಿತ್ಯ ಯಾದಗಿರಿಗೆ ಸಂಚರಿಸುವ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಗಳು ನಿಲ್ಲಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.