ಯಾದಗಿರಿ: ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು, ಶಿಕ್ಷಣ ತರಬೇತಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಇಲ್ಲದೇ ವಿನಾಕಾರಣ ಶಿಕ್ಷಕರು ಹಾಜರಾಗುತ್ತಿರುವುದರಿಂದ ಶಿಕ್ಷಕರಿಗೂ ರಜೆ ಘೋಷಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮಾಲಿಪಾಟೀಲ, ‘ರಾಜ್ಯದಾದ್ಯಂತ ಕೋವಿಡ್–19 ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಒಂದು ವಾರ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದೆ.ಶಿಕ್ಷಕರು, ಉಪನ್ಯಾಸಕರಿಗೆ ರಜೆ ಘೋಷಣೆ ಮಾಡದೇ ಇರುವುದರಿಂದ ಶಾಲೆ–ಕಾಲೇಜುಗಳು, ಸಂಸ್ಥೆಗಳಿಗೆ ತೆರಳಿ ಹಾಜರಿ ಹಾಕುವುದೊಂದೇ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಶಾಲಾ–ಕಾಲೇಜುಗಳಿಗೆ ಬಂದು ಹೋಗುವಂತಾಗಿದೆ.ಇದಲ್ಲದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇಲ್ಲದ ಈವೇಳೆಶಿಕ್ಷಕರು ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಸ್ಥಳಗಳಿಗೆ ಹೋಗಿ ಬರಲು ತೊಂದರೆಯಾಗಿದೆ. ಶಿಕ್ಷಕರಿಗೆ ರಜೆ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಂಗಪ್ಪ ಎಂ. ನಾಟೇಕರ್, ಪರಮರೆಡ್ಡಿ ಕಂದಕೂರು, ಯಮರೆಡ್ಡಿ ಮುಂಡಾಸ, ಬಸವರಾಜ ಯಡ್ಡಳ್ಳಿ, ರಾಚನಗೌಡ ಮುಷ್ಟೂರ, ಸಂತೋಷ ನೀರೇಟಿ, ತಾಯಪ್ಪ ಬದ್ದೆಪಲ್ಲಿ ಇದ್ದರು.