ಸುರಪುರ: ನಗರದ ಉದ್ಯಮಿ ಜೈನ್ ಸಮುದಾಯದ ಭರತಕುಮಾರ ಜೈನ್ ಮತ್ತು ಗುಣವಂತಿ ದಂಪತಿಯ ಪುತ್ರಿ 24 ವರ್ಷದ ಯುವತಿ ಮೋನಿಕಾ ಜೈನ್ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಸನ್ಯಾಸಾಶ್ರಮದ ವಿಧಿ ವಿಧಾನಗಳು ನಡೆದಿವೆ. ಜನವರಿ 11 ರಂದು ನಗರದ ಕುಂತುನಾಥ ಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ಸಕರತ್ವ ಪೂಜೆ, ಅರಿಷಿಣ, ತೊಟ್ಟಿಲೋತ್ಸವ ಜರುಗಲಿದೆ.
ಸಂಜೆ ದೀಕ್ಷಾರ್ಥಿಗೆ ಮನೆಯಿಂದ ದೇವಸ್ಥಾನದವರೆಗೆ ಕುದುರೆ ಮೇಲೆ ಮೆರವಣಿಗೆ ನಂತರ ದೇವಸ್ಥಾನದಲ್ಲಿ ಮೋನಿಕಾಳಿಂದ ದೇವರಿಗೆ ವಿಶೇಷ ಪೂಜೆ, ಆರತಿ ನಡೆಯಲಿದೆ.
ಜನವರಿ 12 ರಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೀಕ್ಷಾರ್ಥಿಯ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರಂಗಲಾಗಿಯೋ ತಾಂಡಿ ನಂತರ ದೀಕ್ಷಾರ್ಥಿ ಭಿಕ್ಷೆ ಕಾರ್ಯಕ್ರಮ, ಸಂಜೆ 7 ಗಂಟೆಗೆ ವಿಜಯ ಸಮಾರೋಪಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಫೆಬ್ರುವರಿ 1 ರಂದು ರಾಜಸ್ಥಾನದ ಜಾಲೂರು ಜಿಲ್ಲೆಯ ಬಾಕ್ರಾರೋಡ್ ತೀರ್ಥ ಎಂಬಲ್ಲಿ ಆಚಾರ್ಯ ಜಯಾನಂದ ಸೂರೇಶ್ವರಾಜಿ ಮತ್ತು ಮಣಿ ಪ್ರಭಾಶ್ರೀಜಿ ಅವರಿಂದ ದೀಕ್ಷಾ ಕಾರ್ಯ ಜರುಗಲಿದೆ.
ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡಿರುವ ಮೋನಿಕಾಳಿಗೆ ಅಜ್ಜಿ, ತಾಯಿ ಗುಣವಂತಿ, ತಂದೆ ಭರತಕುಮಾರ, ಅಣ್ಣ ಮೋಹಿತ್ ಇದ್ದಾರೆ.
ವ್ಯಾಸಂಗದಲ್ಲಿ ಮುಂದುವರಿಯಲು ಆಸಕ್ತಿ ತೋರದೆ, ಐಹಿಕ ಭೋಗವನ್ನು ತಿರಸ್ಕರಿಸಿ ಆಧ್ಯಾತ್ಮ ಕ್ಷೇತ್ರದ ಕಡೆ ಒಲವು ಬೆಳೆಸಿಕೊಂಡಿದ್ದಾರೆ.
ಸತತ ಎರಡು ವರ್ಷಗಳಿಂದ ಪ್ರತಿ ದಿನ ಯೋಗ, ಧ್ಯಾನ, ಆಧ್ಯಾತ್ಮ ಗ್ರಂಥಗಳ ಪಠಣ ದಿನಕ್ಕೆ 8 ರಿಂದ 10 ಗಂಟೆ ಜೈನ್ ಧರ್ಮದ ಆಗಮ ಶಾಸ್ತ್ರ ಹಾಗೂ ಗ್ರಂಥಗಳ ಪಠಣದಲ್ಲಿ ತೊಡಗಿದ್ದಾರೆ.