ಶಹಾಪುರ: ತಾಲ್ಲೂಕಿನ ಕನ್ಯಾಕೊಳ್ಳುರ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿಹನುಮಾನ ದೇವರ ವಿಶೇಷ ಪೂಜೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿ ಭಾವೈಕ್ಯ ಮೆರೆದರು.
ಮುಸ್ಲಿಮರು ಬೆಳಿಗ್ಗೆ ಪೂಜೆಯ ಸಾಮಗ್ರಿಗಳನ್ನು ಖರೀದಿಸಿ ನಂತರ ಸಂಜೆ ಡೊಳ್ಳು, ಭಜನೆಯ ಮೂಲಕ ಆಗಮಿಸಿ 11 ದೀಪಗಳನ್ನು ಹಚ್ಚುವ ಮೂಲಕ ಸೌಹಾರ್ದತೆ ಸಂದೇಶ ಸಾರುತ್ತಾರೆ. ನಂತರ ಜತೆಗೂಡಿ ಪ್ರಸಾದ ಸೇವಿಸುತ್ತಾರೆ.
ನಮ್ಮಲ್ಲಿ ಜಾತಿ, ಮತ ಭೇದವಿಲ್ಲ. ಎಲ್ಲರೂ ಒಗ್ಗೂಡಿ ದೇವರ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಬೇಧಭಾವದ ಸೋಂಕಿನಿಂದ ನಾವು ದೂರ ಉಳಿದಿದ್ದೇವೆ ಎನ್ನುತ್ತಾರೆ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಸಾಹು ಲಕ್ಷ್ಮಿಪುರ ಹಾಗೂ ಸೋಫಿಸಾಬ್.
ಸುಮಾರು 8 ವರ್ಷದಿಂದ ನಾವು ಇಂತಹ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದೇವೆ ಈಗಿನ ವಿಷಮ ವಾತಾವರಣದಲ್ಲಿ ಎಲ್ಲರೂ ಕೂಡಿಕೊಂಡು ಸಾಮರಸ್ಯದ ಜೀವನ ಸಾಗಿಸುವುದು ಅಗತ್ಯವಾಗಿದೆ. ಕೊರೊನಾ ಸೋಂಕು ಜಾತಿ ನೋಡಿಕೊಂಡು ಬರುತ್ತದಯೆ? ಇಲ್ಲ. ಇಂತಹ ಸೌಹಾರ್ದ ವಾತಾವರಣ ಎಲ್ಲಾ ಗ್ರಾಮ ಹಾಗೂ ನಗರಗಳಲ್ಲಿ ಪಸರಿಸಲಿ ಎನ್ನುತ್ತಾರೆ ಅವರು.