ಯಾದಗಿರಿ: ಜಿಲ್ಲೆಯಾದ್ಯಂತ ಶನಿವಾರ ಶ್ರದ್ಧಾಭಕ್ತಿಯಿಂದನಾಗರ ಪಂಚಮಿ ಆಚರಣೆ ಮಾಡಲಾಯಿತು. ಹಾಲು ಬೆಲ್ಲದ ಹಬ್ಬ ಎಂದು ಆಚರಿಸಿ, ವಿವಿಧ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಮಹಿಳೆಯರು, ಮಕ್ಕಳು ಪೂಜೆಯಲ್ಲಿ ತೊಡಗಿಸಿಕೊಂಡಿದ್ದರೆ ಪುರುಷರು ಸಾಹಸಮಯ ಆಟಗಳನ್ನು ಆಡಿ ಖುಷಿಪಟ್ಟರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ಆಟಗಳಲ್ಲಿಗ್ರಾಮಸ್ಥರು ತೊಡಗಿಸಿಕೊಂಡಿದ್ದರು. ನಿಂಬೆಕಾಯಿ ಎಸೆಯುವುದು, ಬಲೂನ್ಕಟ್ಟಿ ಅದನ್ನು ಒಡೆಯುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಯಾದಗಿರಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಆಟಗಳನ್ನು ಆಯೋಜಿಲಾಸಲಾಗಿತ್ತು. ರಾಮಸಮುದ್ರ ಗ್ರಾಮದಲ್ಲಿ ಬಲೂನ್ ಒಡೆಯುವ ಆಟ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿಯ ಕಣ್ಣಿಗೆ ಬಟ್ಟೆ ಕಟ್ಟಿ ಬಲೂನ್ ಒಡೆಯುವ ದೃಶ್ಯ ನೋಡಲು ಹಲವಾರು ಜನರು ಸೇರಿದ್ದರು.
ಸುರಪುರ ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಸಾಹಸಮಯ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.ರಾಜ ಮಹಮದ್ ಎನ್ನುವವರು ಒಂದೇ ಕೈಯಲ್ಲಿ ಎರಡು ಕಿ.ಮೀ. ಚಕ್ಕಡಿಯ ಗಾಲಿಯನ್ನು ಜಾಲಿಬೆಂಚಿಯ ಬಸವಣ್ಣ ದೇವಸ್ಥಾನದಿಂದ ಪೇಠಾ ಅಮ್ಮಾಪುರದ ಹನುಮಾನ ದೇವಸ್ಥಾನದವರೆಗೆ ತಳ್ಳಿ ಪಂದ್ಯ ಗೆದ್ದಿದ್ದಾರೆ.
ಇನ್ನುಳಿದಂತೆನಾಯ್ಕಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಬಲಕಲ್, ಖಾನಾಪುರ, ಚಟ್ನಳ್ಳಿ, ನಾಲ್ವಡಿಗಿ, ಮರಮಕಲ್, ತಂಗಡಿಗಿ, ಕುರುಕುಂದಾ, ತಡಿಬಿಡಿ, ಹುಂಡೆಕಲ್, ಗುಂಡಳ್ಳಿ, ಗುಲಸರಂ, ಉಳ್ಳೆಸುಗೂರ ಹೀಗೆ ಹಲವು ಗ್ರಾಮೀಣ ಭಾಗಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಿದರು.
ನಾಗರ ಪಂಚಮಿಯಂದು ಹಾಲು ಎರೆಯುವ ಸಂಪ್ರದಾಯ. ಶ್ರಾವಣ ಮಾಸದ ಹಬ್ಬವಾದ ನಾಗರ ಪಂಚಮಿ ಅಂಗವಾಗಿ ನಾಗ ದೇವತೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ಹಾಲು ಎರೆದು ಸಂಭ್ರಮಿಸಿದರು. ಬಲಕಲ್ ಗ್ರಾಮದಲ್ಲಿ ನಾಗ ದೇವತೆಗೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಹಾಲೆರೆದರು. ಮಹಿಳೆಯರಾದ ಗುರುಬಸ್ಸಮ್ಮ ಅಗಸಿಮನಿ, ನಾಗಮ್ಮ, ಶಿವಶೀಲಾ ಅಮರಾಪುರ, ನಾಗರತ್ನ, ಭಾಗ್ಯಶ್ರೀ ಹಾಗೂ ಮಕ್ಕಳು ಹಾಲೆರೆದು ಸಂಭ್ರಮಿಸಿದರು.