ಸುರಪುರ: ನರಸಿಂಹಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ರಥವನ್ನು ಹೂ, ತಳಿರುಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪ್ರಾಂಗಣದ ಸುತ್ತಲೂ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ, ಚಿಕ್ಕ ಚಿಕ್ಕ ಮಾವಿನ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಮಂಗಳಾರುತಿ, ನೈವೇದ್ಯ ಜರುಗಿದವು. ಪಂಡಿತ ಹರೇರಾಮಾಚಾರ್ಯ ಪಾಲ್ಮೂರ ಅವರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ ನಡೆಯಿತು. ನಂತರ ಅನ್ನಸಂತರ್ಪಣೆ ಜರುಗಿತು.
ಪ್ರಧಾನ ಅರ್ಚಕರಾದ ಡಾ. ಬಿ.ಆರ್. ಜಾಗೀರದಾರ ಮಾತನಾಡಿ, ‘3 ಶತಮಾನಗಳಿಂದ ನಮ್ಮ ಮನೆತನದವರು ನಿರಂತರವಾಗಿ ಜಯಂತಿ ಆಚರಿಸುತ್ತಿದ್ದೇವೆ. ಲಕ್ಷ್ಮೀ ನರಸಿಂಹಸ್ವಾಮಿ ಉದ್ಭವ ಮೂರ್ತಿಯಾಗಿದ್ದು ಕೇಳಿದ ವರವನ್ನು ಕೊಡುವ ಸ್ವಾಮಿಯಾಗಿದ್ದಾರೆ’ ಎಂದರು.