ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ರೇಷ್ಮೆ ಬೆಳೆಗಾರರಿಗಿಲ್ಲ ಸ್ಥಳೀಯ ಮಾರುಕಟ್ಟೆ

Published 13 ಅಕ್ಟೋಬರ್ 2023, 5:06 IST
Last Updated 13 ಅಕ್ಟೋಬರ್ 2023, 5:06 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 100ಕ್ಕಿಂತ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ತಾವು ಬೆಳೆಸಿರುವ ಗೂಡು ಮಾರಾಟ ಮಾಡಲು ದೂರದ ಮಾರುಕಟ್ಟೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ದಕ್ಷಿಣ ಕರ್ನಾಟಕದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಇದೆ.

ಯಾದಗಿರಿ, ಸುರಪುರ, ಹುಣಸಗಿ, ಗುರುಠಮಕಲ್‌, ವಡಗೇರಾ ತಾಲ್ಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದರೆ, ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಬೆಳೆಗಾರರಿದ್ದಾರೆ.

21 ದಿನಗಳ ರೇಷ್ಮೆ ಹುಳು ಆರೈಕೆ ಮಾಡಿ ಗೂಡು ಕಟ್ಟಿದ ನಂತರ ದೂರದ ರಾಮನಗರ, ಕೋಲಾರ, ಶಿಡ್ಲಘಟ್ಟ ಮತ್ತಿತರ ಕಡೆಗೆ ಗೂಡು ತೆಗೆದುಕೊಂಡು ಹೋಗಬೇಕಿದೆ. 10ರಿಂದ 12 ಗಂಟೆ ಪ್ರಯಾಣ ಮಾಡಬೇಕಿದ್ದು, ವಾಹನ ಬಾಡಿಗೆಗೆ ಸುಮಾರು ₹15–20 ಸಾವಿರ ಖರ್ಚು ಮಾಡಬೇಕು. ಗೂಡಿಗೆ ಕಾವು ಜಾಸ್ತಿಯಾಗಿ ಉತ್ತಮ ದರ ಸಿಗುವುದಿಲ್ಲ ಎನ್ನುವುದು ಬೆಳೆಗಾರರ ಆತಂಕವಾಗಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕಡಿಮೆ:

ಸ್ಥಳೀಯ ಮಟ್ಟದಲ್ಲಿ ರೇಷ್ಮೆ ಮಾರುಕಟ್ಟೆಗಳಿದ್ದರೂ ದರ ಕಡಿಮೆ ಇರುವುದರಿಂದ ಅಲ್ಲಿಗೆ ತೆರಳಿದರೂ ಯಾವುದೇ ಲಾಭವಾಗುವುದಿಲ್ಲ ಎನ್ನುವುದು ಬೆಳೆಗಾರರು ಹೇಳುವ ಮಾತಾಗಿದೆ. ಅಲ್ಲದೇ ಹಣ ಗೂಡು ನೀಡಿದ ನಂತರ ತಕ್ಷಣವೇ ನೀಡುವುದಿಲ್ಲ. ಹೀಗಾಗಿ ಇಲ್ಲಿ ಯಾವುದೇ ಲಾಭವಿಲ್ಲ ಎನ್ನುತ್ತಾರೆ ಗೋಪಾಲ ಕೃಷ್ಣಪ್ಪ ರಾಠೋಡ್.

‘ಕಲಬುರಗಿ, ಜೇವರ್ಗಿ, ಹುಮಾನಬಾದ್‌, ವಿಜಯಪುರ, ಲಿಂಗಸಗೂರಿನಲ್ಲಿ ಸಣ್ಣಮಟ್ಟದ ಮಾರುಕಟ್ಟೆಗಳಿವೆ. ಇವುಗಳನ್ನು ಪುನಶ್ಚೇತನಗೊಳಿಸಬೇಕು. ಆದರೆ, ರೀಲರ್ಸ್‌ಗಳ ಕೊರತೆ ಇದೆ. ಜೊತೆಗೆ ಹಣವನ್ನು ಒಂದು ತಿಂಗಳು ನಂತರ ನೀಡುತ್ತಾರೆ. ಅಲ್ಲದೇ ಬೇಕಾಬಿಟ್ಟಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ದೂರವಾದರೂ ಸರಿ ರಾಮನಗರ, ಕನಕಪುರಕ್ಕೆ ತೆರಳುತ್ತೇವೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ನಮಗೆ ಸಹಾಯ ಹಸ್ತ ಚಾಚಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ರೇಷ್ಮೆ ಗೂಡುಕಟ್ಟದ ಬಗ್ಗೆ ಬೆಳೆಗಾರರು ಮಾಹಿತಿ ನೀಡಲಿ. ಜಿಲ್ಲೆಯಾದ್ಯಂತ ಬೆಳೆಗಾರರು ಇದ್ದರೆ ಮಾರುಕಟ್ಟೆ ಇರುತ್ತಿತ್ತು. ಕೆಲವರು ಇರುವುದರಿಂದ ಮಾರುಕಟ್ಟೆ ಸ್ಥಾಪನೆ ಆಗಿಲ್ಲ
- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಸ್ಥಳೀಯವಾಗಿ ಮಾರುಕಟ್ಟೆ ಇದ್ದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ ಅಧಿಕಾರಿಗಳು ಬೆಳೆಗಾರರಿಗೆ ಕಾರ್ಯಾಗಾರಗಳನ್ನು ಮಾಡಬೇಕು
ಅನಿತಾ ಗೋವಿಂದ ಚವಾಣ್‍, ರೇಷ್ಮೆ ಬೆಳೆಗಾರರು
ರೇಷ್ಮೆ ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸ್ಥಳೀಯವಾಗಿ ಖರೀದಿ ಮಾಡಿದರೆ ಅನುಕೂಲವಾಗುತ್ತದೆ
- ಕಿಶನ್‌ ರಾಥೋಡ್‌, ರೇಷ್ಮೆ ಬೆಳೆಗಾರ
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇದ್ದರೂ ನಾವು ಎಷ್ಟೇ ಖರ್ಚಾದರೂ ದೂರದ ಪ್ರದೇಶಗಳಲ್ಲಿ ಹೋಗಿ ಮಾರಾಟ ಮಾಡುತ್ತೇವೆ. ಸರಿಯಾದ ಬೆಲೆ ಸಿಕ್ಕರೆ ಸ್ಥಳೀಯವಾಗಿ ಮಾರಾಟ ಮಾಡಬಹುದು
- ವಾಸುದೇವ ಪುಲ್‌ಸಿಂಗ್‌, ರೇಷ್ಮೆ ಬೆಳೆಗಾರ
ಅಧಿಕಾರಿಗಳ ನಿರ್ಲಕ್ಷ್ಯ
ಬಾರದ ಸಹಾಯಧನ ದೂರ ಪ್ರದೇಶದ ಮಾರುಕಟ್ಟೆಗೆ ರೇಷ್ಮೆ ಸಾಗಿಸಿದರೆ ಸರ್ಕಾರ ಸಹಾಯಧನ ನೀಡುತ್ತದೆ. ಆದರೆ ಈ ಬಾರಿಯೂ ಗೂಡು ಕಟ್ಟದೆ ಇರುವುದರಿಂದ ಅಲ್ಪ‍ ಸಾಗಿಸಿದರೂ ಸಾಗಣೆ ವೆಚ್ಚ ಬಿಡುಗಡೆಯಾಗಿಲ್ಲ ಎನ್ನುವುದು ಬೆಳೆಗಾರರ ಆರೋಪವಾಗಿದೆ. ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲ ಕಡೆ ಅಧಿಕಾರಿಗಳು ತೆರಳಿ ಪರಿಶೀಲನೆ ಮಾಡುವುದಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ದೂರುತ್ತಾರೆ. ಗೋಗಿ ವ್ಯಾಪ್ತಿಯ ಗ್ರಾಮ ತಾಂಡಾಗಳ ರೇಷ್ಮೆ ಬೆಳೆಗಾರರಿಗೆ ಸಾಗಣೆ ವೆಚ್ಚ ಬಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ಆಗಾಗ ವಿದ್ಯುತ್‌ ಕಡಿತವಾಗುತ್ತಿದ್ದು ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
‘ಕಚೇರಿ ಮರು ಸ್ಥಾಪಿಸಿ’
ಹಲವಾರು ವರ್ಷಗಳ ಹಿಂದೆ ಚಾಮನಾಳ ಲಚಮಾನಾಯಕ್ ತಾಂಡಾದಲ್ಲಿ ರೇಷ್ಮೆ ಇಲಾಖೆ ಕಚೇರಿ ಸ್ಥಾಪನೆ ಮಾಡಲಾಗಿತ್ತು. ಈಗ ಅದನ್ನು ಬಂದ್‌ ಮಾಡಲಾಗಿದೆ. ಹೀಗಾಗಿ ಬೆಳೆಗಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎನ್ನುವುದು ಬೆಳೆಗಾರರ ಆರೋಪವಾಗಿದೆ. ‘ಚಾಮನಾಳ ಲಚಮಾನಾಯಕ್ ತಾಂಡಾದಲ್ಲಿ 10 ವರ್ಷಗಳಿಂದೆ ರೇಷ್ಮೆ ಇಲಾಖೆ ಕಚೇರಿಯನ್ನು ಹೊಂದಿತ್ತು. ಆಗ ಬೆಳೆಗಾರರಿಗೆ ಮಾಹಿತಿ ಸಿಗುತ್ತಿತ್ತು. ಈಗ ಕಟ್ಟಡ ಮಾತ್ರ ಇದ್ದು ಬಾಗಿಲು ಹಾಕಲಾಗಿದೆ. ಇದರಿಂದ ಬೆಳೆಗಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ’ ಎನ್ನುತ್ತಾರೆ ಬೆಳೆಗಾರರರಾದ ಸರಸ್ವತಿ ಹಣಮಂತ ಶಿವುಕುಮಾರ್ ಮೋತಿಲಾಲ್. ‘ಈ ಹಿಂದೆ ರೇಷ್ಮೆ ಸಾಕಾಣಿಕೆ ಬಗ್ಗೆ ತರಬೇತಿ ಸಲಕರಣೆ ಮತ್ತು ಇನ್ನಿತರ ಅವಶ್ಯಕ ಸಾಮಗ್ರಿ ಮತ್ತು ಪ್ರೋತ್ಸಾಹ ನೀಡು ತಿದ್ದರು. ಕೂಡಲೇ ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತೆ ತಾಂಡಾದಲ್ಲಿ ಕಚೇರಿಯನ್ನು ಆರಂಭಿಸಬೇಕು. ಕಾಲಕಾಲಕ್ಕೆ ಬೆಳೆಗಾರರಿಗೆ ಮಾಹಿತಿ ನೀಡಬೇಕು’ ಎಂದು ತಾಂಡಾದ ನಾಯಕ ಕೃಷ್ಣಪ್ಪ ನಾಯ್ಕ್‌ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT