ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತದ ರಾಶಿಗೆ ನೀರು ನುಗ್ಗಿದ್ದು, ಬೆಳೆಗಾರರಿಗೆ ಆತಂಕ ಎದುರಾಗಿದೆ.
ಹೊಲದಲ್ಲಿ ರಾಶಿ ಮಾಡಿ ಹಾಕಲಾಗಿದೆ. ಗುರುವಾರ ರಾತ್ರಿ ಗುಡುಗು ಮಿಶ್ರಿತ ಮಳೆಯಿಂದ ನೀರು ರಾಶಿಗೆ ನುಗ್ಗಿವೆ. ಇದು ರೈತರನ್ನು ಚಿಂತೆಗೀಡು ಮಾಡಿದೆ. ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಎಲ್ಲಿ ಹಾಳಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ವಜ್ಜಲ, ಕಾಮನಟಗಿ, ಕೊಡೇಕಲ್ಲ, ರಾಜನಕೋಳೂರು, ಇಸಾಂಪುರ, ಮುದನೂರು, ಕೂಡಲಗಿ, ತೆಗ್ಗೆಳ್ಳಿ, ಶಖಾಪುರ ಮತ್ತಿತರ ಹಳ್ಳಿಗಳಲ್ಲಿ ಹಾನಿಯಾಗಿದೆ.
ಗುರುರಾಜಗೌಡ ಪಾಟೀಲ ಶಖಾಪುರ ಅವರ 20 ಎಕರೆಯ ಭತ್ತದ ರಾಶಿ, ಮಾನಪ್ಪ ಮಂಗಿಹಾಳ 10 ಎಕರೆ ರಾಶಿ, ಶಿವಪ್ಪ ಚಿಗರಾಳ 15 ಎಕರೆ ರಾಶಿ, ಮಲ್ಲಣ್ಣಗೌಡ ಬಿರಾದಾರ 10 ಎಕರೆ ರಾಶಿ, ಮಾನಪ್ಪ ವಡಗೇರಿಯ 10 ಎಕರೆ ರಾಶಿ, ಭೀಮ್ಮಣ್ಣ ದೇವತಕ್ಕಲ್ 10 ಎಕರೆ ಭತ್ತ ನೀರು ಪಾಲು ಆಗಿದೆ. ಕಷ್ಟಪಟ್ಟು ಬೆಳೆದ ರೈತರು ಈಗ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.