ಶಹಾಪುರ: ನಿರಾಶ್ರಿತರಿಗಾಗಿ ವಸತಿ ಯೋಜನೆಯಡಿ ನಗರದಲ್ಲಿ ಸರ್ವೆ ನಂ.120ರಲ್ಲಿ ಪ್ರಥಮವಾಗಿ ಜ.26ರಂದು ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕ ಶರಣಸಪ್ಪ ದರ್ಶನಾಪುರ ತಿಳಿಸಿದರು.
ಬಾಪುಗೌಡ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ನಗರದಲ್ಲಿ 700 ಕುಟುಂಬಗಳ ನಿರಾಶ್ರಿತರೆಂದು ಗುರುತಿಸಲಾಗಿದೆ. 600 ನಿರಾಶ್ರಿತ ಕುಟುಂಬಗಳಿಗೆ ನಿವೇಶನ ನೀಡಲಾಗುತ್ತದೆ. ಸರ್ಕಾರದ ನಿಯಮದ ಪ್ರಕಾರ ಮೀಸಲಾತಿ ಅಡಿಯಲ್ಲಿ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು ಎಂದರು.
ಆಶ್ರಯ ಕಾಲೊನಿಯಲ್ಲಿ ಹಂಚಿಕೆಯಾದ ಮನೆಗಳಲ್ಲಿ ಒಂದೇ ಕುಟುಂಬಕ್ಕೆ ಸೀಮಿತಗೊಳಿಸಿ ಮನೆ ನೀಡ ಲಾಗುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ಅತಿಕ್ರಮವಾಗಿ ವಾಸಮಾಡುತ್ತಿದ್ದಲ್ಲಿ ಅಥವಾ ಅವರ ಹೆಸರಿನಲ್ಲಿ ಮನೆ ಅಥವಾ ನಿವೇಶನ ಹೊಂದಿದಲ್ಲಿ, ಅವರ ಮನೆಯನ್ನು ಬೇರೆ ನಿರಾಶ್ರಿತರಿಗೆ ಹಂಚಿಕೆ ಮಾಡಲಾಗುತ್ತದೆ. ಒಬ್ಬರಿಗೆ ಒಂದೇ ಮನೆ ನೀಡಿ ಅವರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ನಗರದಲ್ಲಿ ಖಾಲಿ ಇರುವ ಎಲ್ಲಾ ನಿವೇಶನಗಳನ್ನು ನಿರಾಶ್ರಿತರಿಗೆ ನಿಯಾಮವಳಿ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಅಲ್ಲಿನ ಪ್ರದೇಶದಲ್ಲಿ ಮೊದಲು ವಿದ್ಯುತ್, ಕುಡಿಯುವ ನೀರು, ರಸ್ತೆ ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ವಸತಿ ನಿಗಮಕ್ಕೆ ₹3 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ₹ 5 ಕೋಟಿ ವೆಚ್ಚದ ಕ್ರೀಯಾ ಯೋಜನೆಯ ಅನುದಾನಕ್ಕಾಗಿ ರಾಜೀವಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗುತ್ತದ. ಈ ಕುರಿತು ವಸತಿ ಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
ಬಸವೇಶ್ವರ ವೃತ್ತದಿಂದ ಮೋಚಿಗಡ್ಡೆ, ಆಸರ ಮೊಹಲ್ಲಾ, ಕನ್ಯಕೋಳುರು ಅಗಸಿಯವರೆಗೆ ₹80 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಮಾವಿನಕೆರೆ, ನಾಗರಕೆರೆ, ಕೆರೆತುಂಬುವ ಯೋಜನೆಗೆ ₹5 ಕೋಟಿ ವೆಚ್ಚದ ಕರೆಯಲಾಗಿದೆ ಎಂದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರುಪುರಕರ್, ಪೌರಾಯುಕ್ತ ಓಂಕಾರ ಪೂಜಾರಿ, ಎಇಇ ನಾನಾಸಾಹೇಬ್ ಇದ್ದರು.