ಶಹಾಪುರ: ತಾಲ್ಲೂಕಿನಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್, ಧಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಅಸಲಿ ಮದ್ಯದ ಜತೆಗೆ ನಕಲಿ ಮದ್ಯ ಮಾರಾಟವನ್ನು ಈಚೆಗೆ ಅಬಕಾರಿ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಅದರಂತೆ ಉಳಿದ ಕಡೆಯು ಅಕ್ರಮ ಮದ್ಯ ಮಾರಾಟ ಜಾಲವನ್ನು ತಡೆಯುವಂತೆ ಮಂಗಳವಾರ ಕಲ್ಯಾಣ ಕರ್ನಾಟಕ ಯುವ ಸೇನೆ(ಯುವ ಶಕ್ತಿಗಳ ಒಕ್ಕೂಟ) ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಅಲ್ಲದೆ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ಸಂಗ್ರಹಿಸಿ ಇಟ್ಟಿದ್ದ ನಕಲಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಲವಂತದಿಂದ ಬಿಡಿಸಿಕೊಂಡು ಹೋಗುವುದರ ಜತೆಗೆ ಅಬಕಾರಿ ಸಿಬ್ಬಂದಿ ಮೇಲೆ ದಾಳಿ ಮಾಡಿರುವುದನ್ನು ಗಮನಿಸಿದರೆ ಸಮಾಜದ ದುಷ್ಟಶಕ್ತಿಗಳಿಗೆ ಕಾನೂನು ಭಯ ಇಲ್ಲದಂತೆ ಆಗಿದೆ. ಅಕ್ರಮ ಮದ್ಯ ಮಾರಾಟದ ಜಾಲವನ್ನು ಪತ್ತೆ ಹಚ್ಚಬೇಕು. ದೈಹಿಕ ಶ್ರಮವಹಿಸಿ ದುಡಿಯುವ ಬಡ ಕಾರ್ಮಿಕರು ನಕಲಿ ಮದ್ಯದ ಹಾವಳಿಗೆ ತುತ್ತಾಗಿದ್ದಾರೆ. ಅಕ್ರಮ ಮದ್ಯ ಸರಬರಾಜು ಮಾಡಿದ ವ್ಯಕ್ತಿಗಳ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಬೇಕು ಎಂದು ಯುವ ಸೇನೆಯ ಮುಖಂಡರು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕಾಶಪ್ಪ ಹಳಿಸಗರ, ಖಂಡಪ್ಪ ನಾಟೇಕಾರ, ಹೊನ್ನಪ್ಪ ನಾಟೇಕಾರ, ನಾಗರಾಜ ರಸ್ತಾಪುರ, ಶಿವುಕುಮಾರ ಕಟ್ಟಿಮನಿ, ಮಂಜುನಾಥ ಹಾದಿಮನಿ, ಸುರೇಶ ಕಟ್ಟಿಮನಿ, ಸಂತೋಷ ರಸ್ತಾಪುರ, ಶಾಂತಪ್ಪ ಗಂಗನಾಳ ಇದ್ದರು.