ಯಾದಗಿರಿ: ‘ರಾಜ್ಯ ಸರ್ಕಾರ ಎಸ್ಸಿ, ಟಿಎಸ್ಪಿ ಯೋಜನೆ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ರಾಜ್ಯ ಸಮಿತಿ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಹಾಗೂ ರಾಜ್ಯ ಸಮಿತಿ ಸದಸ್ಯ ದೊಡ್ಡಪ್ಪ ಪೂಜಾರಿ ಹುಂಡೇಕಲ್ ಆಗ್ರಹಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರ್ಕಾರ ತನ್ನ ಉಚಿತ ಯೋಜನೆಗಳ ಜಾರಿ ಮಾಡಿ ರಾಜ್ಯದ ಹಣಕಾಸು ಪರಿಸ್ಥಿತಿ ಸರಿದೂಗಿಸಲು ದಲಿತರ ಅನುದಾನವನ್ನು ವರ್ಗಾಯಿಸುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಯೋಜನೆಗಳಿಗೆ ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಢಿಕರಣ ಮಾಡಿಕೊಳ್ಳಿ. ಆದರೆ, ದಲಿತರ ಪಾಲಿನ ಅನುದಾನಕ್ಕೆ ಕೈಹಾಕಿರುವುದು ಸೋಜಿಗದ ಸಂಗತಿ, ಅಧಿಕಾರ ಉಳಿಸಿಕೊಳ್ಳಲು ದಲಿತರ ಅನುದಾನವೇ ಬೇಕೇ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ರಚನೆಗೆ ದಲಿತರ ಮತಬೇಕು. ಈಗ ಉಚಿತ ಭಾಗ್ಯಗಳನ್ನು ಎಲ್ಲರಿಗೂ ಕೊಟ್ಟು ದಿವಾಳಿ ಏಳುವಾಗ ಸರ್ಕಾರ ಉಳಿಸಿಕೊಳ್ಳಲು ದಲಿತರ ಹಣವೇ ಬೇಕೇ ಎಂದು ಪ್ರಶ್ನಿಸಿದ್ದಾರೆ.
‘ಯಾವುದೇ ಕಾರಣಕ್ಕೂ ದಲಿತರಿಗೆ ಮೀಸಲಿಟ್ಟ ಹಣವನ್ನು ಉಪಯೋಗಿಸಬಾರದು ಎಂದು ಒತ್ತಾಯಿಸಿದ ಅವರು, ಒಂದು ವೇಳೆ ಅನುದಾನ ದುರ್ಬಳಕೆ ಮಾಡಿಕೊಂಡಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ’ ಎಂದಿದ್ದಾರೆ.