ಗೆದ್ದಲಮರಿ (ಹುಣಸಗಿ): ‘ಎಸ್ಡಿಎಂಸಿ, ಶಿಕ್ಷಕರು ಹಾಗೂ ಸಮಾಜದ ಮಧ್ಯೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಸಂಪನ್ಮೂಲ ವ್ಯಕ್ತಿ ಶರೀಫ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದ ಎಸ್ಡಿಎಂಸಿ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳ ಶೈಕ್ಷಣಿಕ ಪ್ರಗತಿ ಗುರುತಿಸಬೇಕು. ಶಾಲೆಗೆ ಹಾಜರಾಗುವಂತೆ ನೊಡಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳ ಪಾಲಕರಿಗೆ ಶಿಕ್ಷಣದ ಮಹತ್ವದ ಕುರಿತು ತಿಳಿಸಬೇಕು. ಶಾಲಾ ಅವಧಿಯಲ್ಲಿ ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆಯಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ,‘ಶಿಕ್ಷಕರು ತರಗತಿಯಲ್ಲಿ ಕೇವಲ ಪಠ್ಯ ಬೋಧಿಸಬಾರದು. ಮಹಾನ್ ವ್ಯಕ್ತಿಗಳ ಜೀವನ, ಸಾಧನೆಯ ಕುರಿತು ತಿಳಿಸಬೇಕು’ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸಿದ್ರಾಮರಡ್ಡಿ ಸಾಹು ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವನಾಥ, ಬಸನಗೌಡ ಮಾತನಾಡಿದರು.
ಗ್ರಾಮ ಪಂಚಾಯಿತಿಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.
ಸೋಮಣ್ಣ, ಶಿವರಾಜ ಹೊಕ್ರಾಣಿ, ನಿಂಗಣ್ಣ ಬಿರಾದಾರ, ಭೀಮಣ್ಣ ಕುರಿ, ಅಮರೇಶ ದೇವರಗಡ್ಡಿ, ದೇವಪ್ಪ ಕಾಳೆ, ಭಾರತಿ ಕುಂಬಾರ ಹಾಗೂ ವಿಜಯಲಕ್ಷ್ಮಿ ಕಟ್ಟಿಮನಿ ಇದ್ದರು.