ನಾರಾಯಣಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ದ್ವಿತೀಯ ಭಾಷೆ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯುವ ಮೂಲಕ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಹಂತವನ್ನು ಮುಗಿಸಿದರು.
ಪರೀಕ್ಷಾ ಕೇಂದ್ರದ 18 ಕೊಠಡಿಗಳು, ಗ್ಯಾಲರಿ, ಪ್ರಶ್ನೆಪತ್ರಿಕೆ ಕೊಠಡಿಗಳಿಗೆ ಸಿಸಿ ಟಿವಿ ಕಣ್ಗಾವಲಿನಲ್ಲಿ, ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ಒಟ್ಟಾರೆ ಎಲ್ಲ ವಿಷಯದ ಪರೀಕ್ಷೆಗಳು ಸೂಸುತ್ರವಾಗಿ ನಡೆದಿದ್ದು, ಸದ್ಯ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ದ್ವಿತೀಯ ಭಾಷೆ ಇಂಗ್ಲಿಷ್ ವಿಷಯದ ಪರೀಕ್ಷೆಗೆ 411 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 403 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರೆ 8 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಂಗಯ್ಯ ಬಿಕ್ಷಾವತಿಮಠ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಕೋಟೆ ಅವರ ನೇತೃತ್ವದಲ್ಲಿ ಎಎಸ್ಐ ಬಾಬು ರಾಠೋಡ, ಎಚ್ಸಿಗಳಾದ ಸಂಗಪ್ಪ ಮೇಲಿನಮನಿ, ಪ್ರಕಾಶ ಸೇರಿದಂತೆ ಪೊಲೀಸ್ ಸಿಬ್ಬಂದಿ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.