ಯಾದಗಿರಿ: ಜಿಲ್ಲೆಯ ಸುರಪುರ ಮತಕ್ಷೇತ್ರಕ್ಕೆ ಮೇ 7ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಲೋಕಸಭೆ ಚುನಾವಣೆ ಜೊತೆಗೆ ಉಪಚುನಾವಣೆ ನಿಗದಿಯಾಗಿದ್ದು, ಮತದಾರರು, ಮತಕ್ಷೇತ್ರವೂ ಜಿಲ್ಲೆಯ ಇತರ ಕ್ಷೇತ್ರಕ್ಕಿಂತ ಹೆಚ್ಚಿದೆ.
2024ರ ಜನವರಿ 1ರ ಅನ್ವಯ ಸುರಪುರ ಮತಕ್ಷೇತ್ರದಲ್ಲಿ 2.81 ಲಕ್ಷ ಮತದಾರರು ಇದ್ದಾರೆ. ಏಪ್ರಿಲ್ 1ರಂದು ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಹ ದಿನಾಂಕವಿದ್ದೂ 18 ವರ್ಷ ಪೂರ್ಣಗೊಳ್ಳುವವ ಮತ್ತಷ್ಟು ಯುವ ಮತದಾರರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ 317 ಮತಗಟ್ಟೆಗಳಿದ್ದು, 22 ಸೆಕ್ಟರ್ ಅಧಿಕಾರಿಗಳು ನೇಮಕವಾಗಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರು ಸುರಪುರ ಕ್ಷೇತ್ರದಲ್ಲಿ 28 ಜನ ಇದ್ದು, ಉಳಿದ ಕ್ಷೇತ್ರಗಳಾದ ಶಹಾಪುರ 15, ಯಾದಗಿರಿ 20, ಗುರುಮಠಕಲ್ 6 ಜನ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ.
ಸುರಪುರದ ಶಾಸಕರಾಗಿದ್ದ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಈ ಸ್ಥಾನಕ್ಕೆ ಲೋಕಸಭೆ ಚುನಾವಣೆ ಜೊತೆಯಲ್ಲಿಯೇ ಉಪಚುನಾವಣೆ ನಡೆಸಲು ಆದೇಶ ಹೊರ ಬಿದ್ದ ಬೆನ್ನಲ್ಲೆ ರಾಜಕೀಯ ಚಟುವಟಿಕೆ ಗರಿಗೆದರಿವೆ.
ರಾಜ್ಯದಲ್ಲಿಯೇ ಸುರಪುರ ಮತಕ್ಷೇತ್ರವೂ ಗಮನ ಸೆಳೆಯುವ ಕ್ಷೇತ್ರವಾಗಿದೆ. ಅಲ್ಲದೇ ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಗದ್ದಲ ಗಲಾಟೆ ಆಗುವ ಮೂಲಕ ಕ್ಷೇತ್ರವೂ ಗಮನ ಸೆಳೆದಿತ್ತು.
10 ತಿಂಗಳಲ್ಲೇ ಉಪಚುನಾವಣೆ: 2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ ಅವರು ದಾಖಲೆಯ 25,223 ಮತಗಳಿಂದ ರಾಜೂಗೌಡ ಅವರನ್ನು ಸೋಲಿಸಿದ್ದರು. ಈಗ ಮತ್ತೆ ಚುನಾವಣೆ ನಿಗದಿಯಾಗಿದ್ದು, ಯಾರಿಗೆ ಮತದಾರರರು ಒಲಿಯುತ್ತಾರೆ ಎಂದು ಜೂನ್ 4ರ ತನಕ ಕಾಯಬೇಕಾಗಿದೆ.
ಕಳೆದ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಬಿಜೆಪಿಗೆ ಉತ್ತಮ ಅವಕಾಶ ಸಿಕ್ಕಿದೆ. ಅದೇ ರೀತಿ ಕಾಂಗ್ರೆಸ್ಗೂ ಹಿಂದಿನ ಶಾಸಕರು ನೀಡಿರುವ ಭರವಸೆಗಳನ್ನು ಈಡೇರಿಸಲು ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಐದು ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ಅನುಕಂಪದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
2024ರಲ್ಲಿ ಲೋಕಸಭೆಗೆ ರಾಜ್ಯದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿ ಮಾತ್ರ ಸುರಪುರದಲ್ಲಿ ಉಪ ಚುನಾವಣೆ ನಡೆಯಲಿದೆ. ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಫೆ.25ರಂದು ನಿಧನರಾಗಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತವೇ ಆಗಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ರಾಜಾ ವೆಂಕಟಪ್ಪ ನಾಯಕ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆ ಹೊಂದಿತ್ತು. ಆದರೆ ಅವರ ನಿಧನದಿಂದ ಉಪಚುನಾವಣೆ ಎದುರಿಸುವಂತೆ ಆಗಿದೆ. ಇದು ರಾಜ್ಯದಲ್ಲೇ ನಡೆಯುವ ಏಕೈಕೆ ಉಪಚುನಾವಣೆಯಾಗಿದೆ.
ಮಾಜಿ ಸಚಿವ ರಾಜೂಗೌಡ ಅವರು ರಾಜಾ ವೆಂಕಟಪ್ಪ ನಾಯಕ ಅವರೊಂದಿಗೆ ನಾಲ್ಕು ಬಾರಿ ಮುಖಾಮುಖರಾಗಿದ್ದಾರೆ. ಈಗ ಅವರ ಮಗ ರಾಜಾ ವೇಣುಗೋಪಾಲ ನಾಯಕ ಜತೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಬಿಜೆಪಿಯಿಂದ ಅಧಿಕೃತವಾಗಿ ಇನ್ನೂ ಪಟ್ಟಿ ಬಿಡುಗಡೆ ಮಾಡಿಲ್ಲ. ಶಿವಮೊಗ್ಗದಲ್ಲಿ ಈಚೆಗೆ ನಡೆದ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚುನಾವಣೆಗೆ ಸಿದ್ದರಾಗುವಂತೆ ಮೌಖಿಕವಾಗಿ ಸೂಚಿಸಿದ್ದಾರೆ.
ಪುರುಷ ಮತದಾರರು;141 618
ಮಹಿಳಾ ಮತದಾರರು;139729
ಲಿಂಗತ್ವ ಅಲ್ಪಸಂಖ್ಯಾತರು;28
ಒಟ್ಟು ಮತದಾರರು;281375
ನಗರ ಪ್ರದೇಶ ಮತಗಟ್ಟೆಗಳು;80
ಗ್ರಾಮೀಣ ಪ್ರದೇಶ ಮತಗಟ್ಟೆಗಳು;237
ಒಟ್ಟು ಮತಗಟ್ಟೆಗಳು;317
ಬಂಡೋಳಿ (ಬೀದರ್ ಬೆಂಗಳೂರು ಮುಖ್ಯರಸ್ತೆ)
ನಾರಾಯಣಪುರ (ನಾರಾಯಣಪುರ–ಮುದ್ದೆಬಿಹಾಳ ರಸ್ತೆ)
ಹಗರಟಗಿ (ಕೋಡೆಕಲ್–ತಾಳಿಕೋಟಿ ರಸ್ತೆ)
ಮಾಳನೂರ (ಹುಣಸಗಿ–ತಾಳಿಕೋಟಿ ರಸ್ತೆ)
ಕ್ಷೇತ್ರದ ಹೆಸರು:ಸುರಪುರ (ಎಸ್ಟಿ ಮೀಸಲು)
ಗೆದ್ದ ಅಭ್ಯರ್ಥಿಯ ಹೆಸರು: ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್)
ಪಡೆದ ಮತಗಳು: (113559)
ಗೆಲುವಿನ ಅಂತರ :25223
ಪ್ರತಿಸ್ಪರ್ಧಿ: ನರಸಿಂಹ ನಾಯಕ (ರಾಜೂಗೌಡ) (ಬಿಜೆಪಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.