ಕರ್ತವ್ಯ ಲೋಪ: ಪಿಎಸ್ಐ ಅಮಾನತು
ಯಾದಗಿರಿ: ಜಿಲ್ಲೆಯ ಸುರಪುರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಅವರನ್ನು ಕರ್ತವ್ಯ ಲೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕಿಯಿಸಿ ಎಸ್.ಪಿ, ‘ಇದೊಂದು ಅಂತರಿಕ ವಿಷಯ. ಕರ್ತವ್ಯ ಲೋಪ ಎಸಗಿದ್ದರಿಂದ ಅಮಾನತು ಮಾಡಲಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇಲಾಖೆಯ ಶಿಸ್ತುಕ್ರಮದಂತೆ ಅಮಾನತು ಮಾಡಲಾಗಿದೆ’ ಎಂದರು.
ಈ ಹಿಂದೆ ಅಮಾನತು ಆಗಿರುವ ಸೈದಾಪುರ ಠಾಣೆಯ ಪಿಎಸ್ಐ ಸುವರ್ಣಾ ಮಾಲಶೆಟ್ಟಿ ಅವರನ್ನು ಅದೇ ಠಾಣೆಗೆ ನಿಯುಕ್ತಿಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ‘ಅಮಾನತು ಆದವರನ್ನು ಅದೇ ಠಾಣೆಗೆ ನಿಯೋಜನೆ ಮಾಡಬಾರದು ಎನ್ನುವ ಕಾನೂನು ಇಲ್ಲ. ಹೀಗಾಗಿ ಅವರನ್ನು ಮತ್ತೆ ಅದೇ ಠಾಣೆಗೆ ನಿಯೋಜಿಸಲಾಗಿದೆ. ಯಾದಗಿರಿ ನಗರ ಠಾಣೆಯ ಪಿಎಸ್ಐ ಸೌಮ್ಯ ಅವರ ಓಓಡಿ ವರ್ಗಾವಣೆ ರದ್ದು ಮಾಡಿದ್ದು, ನಗರ ಠಾಣೆಯಲ್ಲಿ ಮುಂದುವರಿಯುತ್ತಾರೆ’ ಎಂದು ತಿಳಿಸಿದರು.
ಡ್ರಗ್, ಗಾಂಜಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋನವಣೆ, ‘ಜಿಲ್ಲೆಯಲ್ಲಿ ಈ ಕುರಿತು ಮಾಹಿತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಗಾಂಜಾ ಬೆಳೆ ಕಂಡುಬಂದರೆ ದಾಳಿ ಮಾಡಲಾಗುತ್ತದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಡ್ರಗ್, ಗಾಂಜಾ ಹಾವಳಿ ಇಲ್ಲ. ಇದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಯರಗೋಳದಲ್ಲಿ ಇತ್ತೀಚೆಗೆ ಇಸ್ಟಿಟ್ ಅಡ್ಡೆ ಮೇಲೆ ದಾಳಿ ನಡೆಸಿ ಹಣ ವಶಪಡಿಸಿಕೊಳ್ಳಲಾಗಿದೆ. ಮುಂದೆಯೂ ಇದೇ ರೀತಿಯ ದಾಳಿಗಳು ನಡೆಯುತ್ತವೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.