ಸುರಪುರ: ‘ನಗರದಲ್ಲಿ ಉದ್ಯಾನ ಇರಲಿಲ್ಲ. ಶಾಸಕ ರಾಜುಗೌಡ ಅವರು ಆಸಕ್ತಿ ವಹಿಸಿ ಅರಣ್ಯ ಇಲಾಖೆಯಿಂದ ಸುಂದರ ವೃಕ್ಷೋದ್ಯಾನ ನಿರ್ಮಿಸಿಕೊಟ್ಟಿದ್ದಾರೆ. ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಹೇಳಿದರು.
ಪ್ರಾದೇಶಿಕ ಅರಣ್ಯ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಉದ್ಯಾನದಲ್ಲಿ ಮಕ್ಕಳ ಆಟಿಕೆ ಹಾಗೂ ವ್ಯಾಯಾಮ ಸಾಮಗ್ರಿ ಅಳವಡಿಸಲಾಗಿದೆ. ವಾಯು ವಿಹಾರಿಗಳಿಗೆ ನೆಚ್ಚಿನ ತಾಣವಾಗಿದೆ. ಯಾವುದೇ ಕಾರಣಕ್ಕೆ .ಆಟಿಕೆ ಸಾಮಗ್ರಿಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಮಾತನಾಡಿ, ‘ಜಿಲ್ಲೆಯಲ್ಲಿ ಇಂತಹ ಉದ್ಯಾನ ಇಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರು ವೃಕ್ಷೋದ್ಯಾನದ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮರಗಿಡಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಸಸಿ ನೆಟ್ಟು ಸುಂದರ ಪರಿಸರ ನಿರ್ಮಾಣಕ್ಕ ಕೈ ಜೋಡಿಸಬೇಕು’ ಎಂದರು.
ವಲಯ ಅರಣ್ಯಾಧಿಕಾರಿ ಮೌಲಾಲಿ ಮಾತನಾಡಿ, ‘ಉದ್ಯಾದ ರಸ್ತೆ ಮತ್ತು ಇನ್ನಷ್ಟು ಅಭಿವೃದ್ದಿಗಾಗಿ ಅನುದಾನದ ಅಗತ್ಯವಿದೆ. ಶಾಸಕರು ಅನುದಾನ ಒದಗಿಸಿದಲ್ಲಿ ಅನುಕೂಲವಾಗಲಿದೆ’ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಮಾತನಾಡಿ, ‘ಮುಂಬರುವ ದಿನಗಳಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗುವುದು’ ಎಂದರು.
ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ, ಮುಖಂಡರಾದ ಸಣ್ಣ ದೇಸಾಯಿ ದೇವರಗೋನಾಲ, ಭೀಮಣ್ಣ ಬೇವಿನಾಳ, ಭೀಮಣ್ಣ ಕಟ್ಟಿಮನಿ ಇದ್ದರು. ಉಪ ವಲಯ ಅರಣ್ಯಾಧಿಕಾರಿ ಗಿರೀಶ ಕರ್ನಾಳ ಸ್ವಾಗತಿಸಿದರು. ಶರಣಬಸವ ಗೋನಾಲ ನಿರೂಪಿಸಿದರು. ಮಾನಪ್ಪ ಶಹಾಪುರಕರ್ ವಂದಿಸಿದರು.