ಕೆಂಭಾವಿ: ವಾಹನ ದಟ್ಟಣೆ ನಿಯಂತ್ರಣ ಮಾಡುವ ಪೊಲೀಸರ ವಾಹನವೇ ಮುಖ್ಯ ರಸ್ತೆಯ ಮಧ್ಯ ಭಾಗದಲ್ಲಿ ಕೆಟ್ಟು ನಿಂತು ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಪೊಲೀಸ್ ಠಾಣೆಗೆ ಸೇರಿದ ಬೊಲೆರೊ ವಾಹನ ತಾಂತ್ರಿಕ ತೊಂದರೆಯಿಂದ 8 ಗಂಟೆ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಕೆಟ್ಟು ನಿಂತಿತ್ತು. ದುರಸ್ತಿಗೊಳಿಸಲು ಅವಶ್ಯ ಇರುವ ಸಾಮಗ್ರಿ ದೊರೆಯದ ಕಾರಣ ಬೆಳಿಗ್ಗೆಯಿಂದ ವಾಹನ ನಿಂತಲ್ಲೆ ನಿಂತಿತ್ತು. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕೆಲಕಾಲ ಗಲಿಬಿಲಿ ಉಂಟಾಯಿತು. ಮಧ್ಯಾಹ್ನದ ನಂತರ ವಾಹನ ದುರಸ್ತಿಗೊಳಿಸಿ ಕೊಂಡೊಯ್ಯಲಾಯಿತು.
ಠಾಣೆಗೆ ಬರುವ ಎಲ್ಲ ವಾಹನಗಳು ಗುಜರಿಗೆ ಸೇರ್ಪಡೆಯಾಗುವ ವಾಹಗಳಾಗಿದ್ದು, ಇದರಿಂದ ಪೊಲೀಸರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಠಾಣೆಗೆ ಹೊಸ ವಾಹನ ಒದಗಿಸಿ ಅನುಕೂಲ ಕಲ್ಪಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.
‘ಬೊಲೆರೊ ವಾಹನದ ಮುಂದಿನ ಚಕ್ರದಲ್ಲಿ ತಾಂತ್ರಿಕ ದೋಷ ಉಂಟಾಗಿ ಮುಂದೆ ಚಲಿಸಲಾಗದೆ ಇದ್ದ ಸ್ಥಳದಲ್ಲಿ ವಾಹನ ಕೆಟ್ಟು ನಿಂತಿತು. ದುರಸ್ತಿಗೆ ಬೇಕಾದ ಬಿಡಿಭಾಗಗಳು ಪಟ್ಟಣದಲ್ಲಿ ಸಿಗದೆ ಇರುವುದರಿಂದ ಬೇರೆ ಕಡೆಯಿಂದ ಸಾಮಾನು ತಂದಿದ್ದರಿಂದ ಸ್ವಲ್ಪ ತಡವಾಗಿ ವಾಹನ ದುರಸ್ತಿಗೊಳೊಳಿಸಿ ಕೊಂಡೊಯ್ಯಲಾಯಿತು’ ಎಂದು ಕೆಂಭಾವಿ ಪಿಎಸ್ಐ ಗಜಾನಂದ ಬಿರಾದಾರ ತಿಳಿಸುತ್ತಾರೆ.