ಕೆಂಭಾವಿ: ಪುರಸಭೆಯ ಕೇಂದ್ರ ಸ್ಥಾನವಾದ ಪಟ್ಟಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಲಾದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಗ್ರಹಣ ಹಿಡಿದಿದ್ದು, ಬೃಹತ್ ಪ್ರಮಾಣದ ಯೋಜನೆಯು ಆಮೆಗತಿಯಲ್ಲಿ ಸಾಗುತ್ತಿದೆ.
ನಗರೋತ್ಥಾನ-2 ಹಾಗೂ ಕೆಕೆಆರ್ಡಿಬಿ ಅನುದಾನ ₹4.32 ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಹಿಲ್ಟಾಪ್ ಕಾಲೊನಿಯಲ್ಲಿ ನಿರ್ಮಿಸುತ್ತಿರುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಹಸಿರು ನಿಶಾನೆ ತೋರಿಸಿದ್ದರು.
ಪಟ್ಟಣಕ್ಕೆ ನೀರು ಪೂರೈಕೆಯ ಬೃಹತ್ ಪ್ರಮಾಣದ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಲುವೆಯಿಂದ ಪೈಪ್ಲೈನ್, ಶುದ್ಧೀಕರಣದ ಕಟ್ಟಡ, ವಿದ್ಯುತ್ ಕಾಮಗಾರಿ ಸೇರಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕೆಲಸಗಳು ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಸ್ಥಗಿತಗೊಂಡಿರುವ ಕೆಲಸವನ್ನು ಶೀಘ್ರದಲ್ಲೆ ಪೂರ್ಣಗೊಳಿಸಿ ಜನರಿಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ತಾಣ: ನೀರು ಶುದ್ಧೀಕರಣ ಘಟಕದ ಬಳಿ ನಿರ್ಮಿಸಿದ ಪಂಪ್ಹೌಸ್ನಲ್ಲಿ ಮದ್ಯಪ್ರಿಯರ ಮೋಜು ಮಸ್ತಿ ಶುರುವಾಗಿದ್ದು, ಖಾಲಿ ಮದ್ಯದ ಬಾಟಲಿಗಳು ಸಂಗ್ರಹವಾಗಿವೆ. ಕಾಮಗಾರಿ ನಿರ್ವಹಿಸುತ್ತಿರುವ ಅಧಿಕಾರಿ ಗಳು ಈ ಬಗ್ಗೆ ಗಮನ ಹರಿಸಬೇಕು ಎಂಬುದು ಜನರ ಒತ್ತಾಯವಾಗಿದೆ.